ಮೈಸೂರು : ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ದಿಢೀರ್ ಸುದ್ದಿಗೋಷ್ಟಿ ನಡೆಸಿದ್ದು. ಚಾಮರಾಜನಗರದಲ್ಲಿನ ಜಮೀನು ವಿಚಾರದಲ್ಲಿ ಅಲ್ಲಿನ ಜನರು ಆತಂಕಪಡುವ ಅಗತ್ಯವಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಆ ಜಮೀನನ್ನು ನಮಗೆ ನೀಡಿದರು. ನಾವೂ ಜನರಿಗೆ ತೊಂದರೆ ಕೊಡುವುದಿಲ್ಲ ಎಂದು ಹೇಳಿದರು.
ರಾಜಮಾತೆ ಪ್ರಮೋದದೇವಿಯವರು ಚಾಮರಾಜನಗರದಲ್ಲಿರುವ ಸುಮಾರು 4500 ಸಾವಿರ ಎಕರೆ ಜಾಗವನ್ನು ಖಾತೆ ಮಾಡಿಕೊಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದರ ಕುರಿತು ಸಿದ್ದಯ್ಯನಪುರ ಗ್ರಾಮದ ಜನರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಜಮೀನನ್ನು ಖಾತೆ ಮಾಡಿಕೊಡಬೇಡಿ ಎಂದು ಮನವಿ ಮಾಡಿದ್ದರು. ಇದೀಗ ಈ ಕುರಿತು ಪ್ರಮೋದ ದೇವಿ ದಿಢೀರ್ ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಮೋದ ದೇವಿ “ಚಾಮರಾಜನಗರದ ಜಮೀನು ವಿಚಾರದಲ್ಲಿ ಆ ಭಾಗದ ಜನರು ಆತಂಕಪಡುವ ಅಗತ್ಯವಿಲ್ಲ. 1950ನೇ ಇಸವಿಯ ದಾಖಲೆಗಳ ಆಧಾರದ ಮೇಲೆ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ತಹಸೀಲ್ದಾರ್ ಹಾಗು ರಾಜ್ಯ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ. ಅಂದಿನ ಮಹಾರಾಜರು ಜಮೀನು ಕೊಟ್ಟಿದ್ದರೆ ಅದನ್ನು ಕಿತ್ತುಕೊಳ್ಳುವುದಿಲ್ಲ.
ಆ ಜಮೀನನ್ನು ರಾಜ್ಯ ಸರ್ಕಾರ ನಮಗೆ ನೀಡಿದರೂ ಕೂಡ ಅಲ್ಲಿನ ಜನರಿಗೆ ತೊಂದರೆ ಕೊಡುವುದಿಲ್ಲ. ಯಥಾಸ್ಥಿತಿ ಕಾಯ್ದುಕೊಳ್ಳುತ್ತೇವೆ. ಅಲ್ಲಿನ ಜನರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ. ಕಂದಾಯ ಗ್ರಾಮ ಮಾಡುವುದಾಗಿ ಚಾಮರಾಜನಗರ ಜಿಲ್ಲಾಡಳಿತ ಹೇಳಿದ್ದರಿಂದ ನಮ್ಮ ಜಮೀನು ಅಲ್ಲಿರುವ ಕಾರಣ ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಯಾವುದೇ ವಿಚಾರವಿದ್ದರೂ, ಸಮಸ್ಯೆಗಳಿದ್ದರೂ ಆ ಭಾಗದ ಗ್ರಾಮಸ್ಥರು ನಮ್ಮನ್ನು ನೇರವಾಗಿ ಸಂಪರ್ಕಿಸಲಿ. ಗ್ರಾಮಸ್ಥರ ಬಳಿಯಿರುವ ದಾಖಲೆಗಳ ಬಗ್ಗೆ ನಮಗೆ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಆ ಭಾಗದ ಗ್ರಾಮಸ್ಥರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
