ಮಂಗಳೂರು: ನಿನ್ನೆ ( ಮೇ 1) ರಾತ್ರಿ 8.30ರ ಸಮಯಕ್ಕೆ ಸಂಭವಿಸಿದ ಭೀಕರ ಘಟನೆಯೊಂದರಲ್ಲಿ ಸುಹಾಸ್ ಶೆಟ್ಟಿ ಎಂಬಾತನನ್ನು ಆರು ಮಂದಿ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲೇ ಸುಹಾಸ್ ಶೆಟ್ಟಿಯನ್ನು ಲಾಂಗ್ ಹಿಡಿದು ಕೊಚ್ಚಿ ಹಾಕಲಾಗಿದ್ದು, ದೃಶ್ಯವನ್ನು ಸ್ಥಳೀಯರು ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ
ಸುಹಾಸ್ 2022ರಲ್ಲಿ ಸುರತ್ಕಲ್ನಲ್ಲಿ ನಡೆದಿದ್ದ ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಫಾಜಿಲ್ ಹತ್ಯೆಯು ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಅವರ 2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ನಡೆದ ಹತ್ಯೆಯ ಎರಡು ದಿನಗಳ ನಂತರ ಸಂಭವಿಸಿತ್ತು.
ಪ್ರಕರಣದ ಬಗ್ಗೆ ಮಾತನಾಡಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುಹಾಸ್ ಶೆಟ್ಟಿಯನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗಿದೆ. 2022ರಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು ಹಾಗೂ ಐದಾರು ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸುಹಾಸ್ ವಿರುದ್ಧ ಐದು ಪ್ರಕರಣಗಳಿವೆ. 2022ರಲ್ಲಿ ಫಾಜಿಲ್ ಹತ್ಯೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಮಂಗಳೂರಿನಲ್ಲಿ ಗ್ಯಾಂಗ್ ಸಂಬಂಧಿತ ಹಿಂಸಾಚಾರ ಹೆಚ್ಚುತ್ತಿದ್ದು, 2024ರ ಜೂನ್ನಲ್ಲಿ ಡೇರಳಕಟ್ಟೆಯಲ್ಲಿ ಒಬ್ಬ ಯುವತಿಯ ಮೇಲೆ ಚಾಕು ಇರಿತದ ಘಟನೆ ವರದಿಯಾಗಿತ್ತು. ಸುಹಾಸ್ನ ಹತ್ಯೆಯು 2022ರಿಂದ ಈ ಭಾಗದಲ್ಲಿ ಸಂಭವಿಸಿದ ಮೂರನೇ ಪ್ರಮುಖ ಕೊಲೆ ಪ್ರಕರಣವಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧ ತಡೆಗಟ್ಟಲು ಕರ್ನಾಟಕ ಸರ್ಕಾರವು ಮಂಗಳೂರಿನಲ್ಲಿ ಕಾನೂನು ಜಾರಿ ತಂತ್ರಗಳ ಪರಿಶೀಲನೆಗೆ ಮುಂದಾಗಿದೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಬೇಟೆ ಆರಂಭಿಸಿದ್ದಾರೆ.
