ಉಜಿರೆ: ಎಸ್ಡಿಎಂ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನಲ್ಲಿ ಮೂರನೇ ಅಂತಾರಾಷ್ಟ್ರೀಯ ಯೋಗ ಮತ್ತು ನ್ಯಾಚುರೋಪತಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಐದು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಮೇ 16ರಂದು ಕೊನೆಗೊಳ್ಳಲಿದೆ. ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉಪನ್ಯಾಸಕರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದ ಮೊದಲ ದಿನ ಹಲವು ಯೋಗ ಮತ್ತು ನ್ಯಾಚುರೋಪತಿ ಕುರಿತ ಪುಸ್ತಕಗಳನ್ನು ಬಿಡುಗಡೆ ಮಾಡಿ, ಧರ್ಮಸ್ಥಳದ ಧರ್ಮಾದಿಕಾರಿ ಹಾಗೂ ಎಸ್ಡಿಎಂಸಿ ಸೊಸೈಟಿಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, “ನಮ್ಮ ಯೋಗ ಮತ್ತು ನ್ಯಾಚುರೋಪತಿ ಕಾಲೇಜುಗಳು ದೇಹವು ತಾನಾಗಿಯೇ ಗುಣಮುಖವಾಗುತ್ತದೆ ಎಂಬ ಧ್ಯೇಯವನ್ನು ಹೊಂದಿವೆ. ಇಂದಿನ ವೈಜ್ಞಾನಿಕ ಯುಗದಲ್ಲಿ ನ್ಯಾಚುರೋಪತಿಯ ಮಹತ್ವ ಹೆಚ್ಚುತ್ತಿದೆ,”
ವಿಜ್ಞಾನ ಮುಂದುವರೆಯುತ್ತಿದೆ. ಜನರಿಗೆ ಆರೋಗ್ಯ ಸಮಸ್ಯೆಯಾದರೆ ವೈದ್ಯರ ಬಳಿ ಹೋಗಿ, ನಾವು ಹಣವನ್ನು ನೀಡುತ್ತೇವೆ ನಮಗೆ ಆರೋಗ್ಯವನ್ನು ನೀಡಿ ಎಂದು ಕೇಳುತ್ತಿದ್ದಾರೆ. ಆದರೆ ನಮ್ಮ ನ್ಯಾಚುರೋಪತಿ ಮತ್ತು ಆಯುರ್ವೇದ ಕಾಲೇಜಿನಲ್ಲಿ ದೇಹವು ತಾನಾಗಿಯೇ ಗುಣಮುಖವಾಗುತ್ತದೆ ಎಂದು ಹೇಳಿಕೊಡುತ್ತೇವೆ ಎಂದರು.

ಎಸ್ವಿವೈಎಎಸ್ಎ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಆರ್. ನಾಗೇಂದ್ರ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಡಾ. ನಾಗೇಂದ್ರ ಮಾತನಾಡಿ, “ಆಧುನಿಕ ವೈದ್ಯಕೀಯದ ಜೊತೆಗೆ ಆಯುರ್ವೇದ ಮತ್ತು ನ್ಯಾಚುರೋಪತಿಯ ಸೇವೆಗಳನ್ನು ವಿಶ್ವವೇ ಮೆರೆದಿದೆ. ನಾವಿನ್ನೂ ಇದರ ಮಹತ್ವವನ್ನು ಸಮರ್ಪಕವಾಗಿ ಅರಿಯಬೇಕು,” ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಅವರು “ನಮ್ಮ ಜಿಲ್ಲೆಯಲ್ಲಿ ಟ್ರೆಡಿಷನಲ್ ಮೆಡಿಸಿನ್ ಸೆಂಟರ್ ಸ್ಥಾಪನೆಯ ಪರಿಕಲ್ಪನೆಯಿದೆ. ಆದರೆ ಎಸ್ಡಿಎಂ ಈಗಾಗಲೇ ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದೆ,” ಎಂದು ತಿಳಿಸಿದರು.
ಐಎನ್ವೈಜಿಎಂಎ ಅಧ್ಯಕ್ಷ ಡಾ. ನವೀನ್ ಕೆ.ವಿ, ಎಸ್ವಿವೈಎಎಸ್ಎ ಉಪಕುಲಪತಿ ಡಾ. ಎನ್.ಕೆ. ಮಂಜುನಾಥ್, ಡಾ. ಬಾಬು ಜೋಸೆಫ್, ಹರ್ಷೇಂದ್ರ ಕುಮಾರ್, ಡಾ. ಸತೀಶ್ಚಂದ್ರ, ಡಾ. ಪ್ರಶಾಂತ್ ಶೆಟ್ಟಿ ಮತ್ತು ಇತರ ಗಣ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಂಚದಿನಗಳ ಈ ಸಮ್ಮೇಳನದಲ್ಲಿ ನ್ಯಾಚುರೋಪತಿ, ಯೋಗ, ಆಯುರ್ವೇದ ಸೇರಿದಂತೆ ಪರಂಪರೆಯ ವೈದ್ಯಕೀಯ ಪದ್ದತಿಗಳ ಕುರಿತಾದ ವಿಚಾರ ಸಂಕಿರಣ, ಉಪನ್ಯಾಸ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿದ್ದು, ವೈದ್ಯಕೀಯ ಕ್ಷೇತ್ರದ ನೂತನ ಆಲೋಚನೆಗಳಿಗೂ ವೇದಿಕೆಯಾಗಲಿದೆ.
