ಬೆಂಗಳೂರು: ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿ ಮುಂದುವರಿದಿರುವ ಬಗ್ಗೆ ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಇಡಿ ದಾಳಿ ಬಗ್ಗೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವ ವಿಚಾರಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇಡಿ ಅಧಿಕಾರಿಗಳು ನಮ್ಮ ಸಂಸ್ಥೆಯ ಅಕೌಂಟ್ಸ್ ಕೇಳಿದ್ದಾರೆ. ಯಾವ ವರ್ಷದ ಲೆಕ್ಕ ಕೇಳುತ್ತಾರೆಯೋ ಅದನ್ನೆಲ್ಲ ಕೊಡಿ ಎಂದು ಸೂಚಿಸಿದ್ದೇನೆ ಎಂದರು.
ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯ ಉದ್ದೇಶ ಗೊತ್ತಿಲ್ಲ, ಅವರಿಗೆ ಸಹಕಾರ ಕೊಟ್ಟಿದ್ದೇವೆ. ನಾನು ಕಾನೂನಿಗೆ ಬೆಲೆ ಕೊಟ್ಟು ಬಂದವನು ನಾನು. ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ಗೌರವ ಕೊಡುತ್ತೇನೆ . ಇಡಿ ಅಧಿಕಾರಿಗಳು ಏನು ಬೇಕಾದರೂ ಪರಿಶೀಲನೆ ಮಾಡಲಿ. ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಪರಮೇಶ್ವರ್ ಹೇಳಿದರು.
ದಲಿತ ಎಂಬ ಕಾರಣಕ್ಕೆ ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂಬ ರಣದೀಪ್ ಸುರ್ಜೇವಾಲ ಆರೋಪ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇಂಥ ವಿಚಾರಗಳಲ್ಲಿ ಯಾರೂ ಜಾತಿ ನೋಡಿ ಬರುವುದಿಲ್ಲ. ಆ ಬಗ್ಗೆ ಈಗ ನಾನು ಏನೂ ಹೇಳುವುದಿಲ್ಲ ಎಂದರು.
ನಮ್ಮ ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿ 68 ವರ್ಷಗಳೇ ಆಗಿವೆ. ನಮ್ಮ ತಂದೆ ಕಾಲದಿಂದಲೂ ಸಂಸ್ಥೆ ನಡೆಯುತ್ತಿದೆ. ಸಿದ್ದಾರ್ಥ ಸಂಸ್ಥೆಯಲ್ಲಿ ಕಲಿತು 40,000 ಮಂದಿ ಎಂಜಿನಿಯರ್ ಆಗಿದ್ದಾರೆ. ನಮ್ಮ ಸಂಸ್ಥೆಯ ಮೂಲಕ 10,000 ಮಂದಿ ವೈದ್ಯರಾಗಿದ್ದಾರೆ. ಜಾರಿ ನಿರ್ದೇಶನಾಲಯ ಇಲ್ಲಿಯವರೆಗೆ ಏನೂ ಹೇಳಿಲ್ಲ. ಶಫಿ ಅಹ್ಮದ್ ಅವರ ಶಿಕ್ಷಣ ಸಂಸ್ಥೆಯನ್ನೂ ಖರೀದಿ ಮಾಡಿದ್ದೇವೆ. ಸದ್ಯ ಇಡಿ ವಿಚಾರಣೆ ನಡೆಯುತ್ತಿದೆ, ಈಗ ಹೆಚ್ಚಿನದ್ದೇನನ್ನೂ ವಿವರಿಸಲು ಆಗುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.
