ಶ್ಲೋಕ – 20
ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾSದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥೨೦॥
ದ್ಯಾವಾಪೃಥಿವ್ಯೋಃ ಇದಮ್ ಅಂತರಮ್ ಹಿ ವ್ಯಾಪ್ತಮ್ ತ್ವಯಾ ಏಕೇನ ದಿಶಃ ಚ ಸರ್ವಾಃ ।
ದೃಷ್ಟ್ವಾ ಅದ್ಭುತಮ್ ರೂಪಮ್ ಉಗ್ರಮ್ ತವ ಇದಮ್ ಲೋಕತ್ರಯಮ್ ಪ್ರವ್ಯಥಿತಮ್ ಮಹಾತ್ಮನ್ –ಈ ನೆಲ ಮುಗಿಲ ನಡುವೆಲ್ಲ ಒಂದೇ ರೂಪದಿಂದ ತುಂಬಿರುವೆ. ನಿನ್ನವೇ ರೂಪಗಳು ಎಲ್ಲ ದಿಕ್ಕುಗಳಲ್ಲು. ಓ ಮಹಾತ್ಮನೆ, ಅಚ್ಚರಿಯ, ಎದೆಗೆಡಿಸುವ ನಿನ್ನ ಈ ರೂಪವನ್ನು ಕಂಡು ಕಂಗೆಟ್ಟಿದೆ ಮೂರು ಲೋಕ.
ನಿನ್ನ ರೂಪ ಭೂಮಿ ಆಕಾಶವನ್ನು ವ್ಯಾಪಿಸಿ ನಿಂತಿದೆ. ಎಲ್ಲ ದಿಕ್ಕುಗಳಲ್ಲಿ ಅನಂತವಾಗಿ ವ್ಯಾಪಿಸಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ. ಮೂರು ಲೋಕದಲ್ಲಿ ನಿನ್ನ ರೂಪವನ್ನು ಕಂಡವರು ಈ ನಿನ್ನ ಉಗ್ರ ರೂಪವನ್ನು ನೋಡಿ ಕಂಗೆಡುತ್ತಿದ್ದಾರೆ. ಜಗತ್ತು ತತ್ತರಿಸುತ್ತಿದೆ ಎಂದು ದಿಗ್ಭ್ರಮೆಯಿಂದ ಅರ್ಜುನ ತನ್ನ ಅನುಭವವನ್ನು ಭಗವಂತನಲ್ಲಿ ಹೇಳಿಕೊಳ್ಳುತ್ತಾನೆ.
