ಬೆಂಗಳೂರು : ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಲ್ಲಿಅಪರಾಧಿಗಳಿಗೆ ಸ್ವಾಭಾವಿಕ ಸಾವಿನವರೆಗೆ ಅಂದರೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗಿಲ್ಲ. ಅಂತಹ ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗೆ ಮಾತ್ರ ಇದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
2025ರ ಡಿಸೆಂಬರ್ನಲ್ಲಿಸುಪ್ರೀಂ ಕೋರ್ಟ್ ‘ಕಿರಣ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದಲ್ಲಿ ಸಿಆರ್ಪಿಸಿ ಸೆಕ್ಷನ್ 428ರ ಪ್ರಕಾರ ಯಾವುದೇ ವಿನಾಯಿತಿ ಇಲ್ಲದೆ ಜೀವಾವಧಿ (ಜೀವನ ಪರ್ಯಂತ ಜೈಲು)ಶಿಕ್ಷೆ ವಿಧಿಸುವ ಅಧಿಕಾರವನ್ನು ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ನೀಡಲಾಗಿದೆಯೇ ಹೊರತು ಸೆಷನ್ಸ್ ನ್ಯಾಯಾಲಯಗಳಿಗಲ್ಲಎಂದು ಆದೇಶಿಸಿತ್ತು.
ಅದನ್ನು ಆಧರಿಸಿ ಈಗ ಹೈಕೋರ್ಟ್, ಸೆಷನ್ಸ್ ಕೋರ್ಟ್ಗಳಿಗೆ ಅಂತಹ ಅಧಿಕಾರ ಇಲ್ಲವೆಂದು ತೀರ್ಪು ನೀಡಿರುವುದರಿಂದ ಇನ್ನು ಮುಂದೆ ಕೇವಲ ಜೀವಾವಧಿ ಶಿಕ್ಷೆ ವಿಧಿಸಬಹುದೇ ಹೊರತು ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಲಾಗದು ಎಂದು ಆದೇಶಿಸಿದೆ.
ಮಗುವಿನ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪಿ ಶಿವಮೊಗ್ಗದ ರುದ್ರೇಶ್ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯ ತನಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪಧಿರಿಶೀಲಿಸಿದ ನ್ಯಾ. ಎಚ್.ಪಿ.ಸಂದೇಶ್ ಮತ್ತು ನ್ಯಾ.ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ಇಂತಹ ತೀರ್ಪು ನೀಡಿದೆ. ಇದರಿಂದಾಗಿ ಇನ್ನು ಮುಂದೆ ಸೆಷನ್ಸ್ ಕೋರ್ಟ್ಗಳು ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಜೀವನಪರ್ಯಂತ ಶಿಕ್ಷೆ ವಿಧಿಸಲಾಗದು.
ಜೀವಾವಧಿ ಶಿಕ್ಷೆ ವಿಧಿಸಬಹುದು
ಹೆಚ್ಚೆಂದರೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಬಹುದು. ತನ್ನ 86 ಪುಟಗಳ ತೀರ್ಪಿನಲ್ಲಿಎಲ್ಲಾಅಂಶಗಳನ್ನು ಅವಲೋಕಿಸಿರುವ ನ್ಯಾಯಾಲಯ, ಸಿಆರ್ಪಿಸಿ ಸೆಕ್ಷನ್ 428ರಡಿ ಶಿಕ್ಷೆ ವಿಧಿಸುವ ಕುರಿತು ಸುಪ್ರೀಂಕೋರ್ಟ್ ‘ಕಿರಣ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ’ ಪ್ರಕರಣದಲ್ಲಿತೀರ್ಪು ಉಲ್ಲೇಖಿಸಿದೆ.
ಆರೋಪಿಗೆ ಅಧೀನ ನ್ಯಾಯಾಲಯ 2017ರ ನ.27ರಂದು ನೀಡಿದ್ದ ಜೀವನ ಪರ್ಯಂತ ಶಿಕ್ಷೆಯನ್ನು ಮಾರ್ಪಾಡು ಮಾಡಿರುವ ಹೈಕೋರ್ಟ್, ಜೀವಾವಧಿ ಶಿಕ್ಷೆಯನ್ನು ಮಾತ್ರ ವಿಧಿಸಿದೆ. ಸುಪ್ರೀಂಕೋರ್ಟ್ ತೀರ್ಪಿನ ಮಾನದಂಡಗಳನ್ನು ಅನ್ವಯಿಸಿದರೆ ವಿಚಾರಣಾಧೀನ ನ್ಯಾಯಾಲಯ ಅಪರಾಧಿಗೆ ಯಾವುದೇ ವಿನಾಯಿತಿ ಇಲ್ಲದೆ ಜೀವನ ಪರ್ಯಂತ ಶಿಕ್ಷೆ ವಿಧಿಸಲು ಅವಕಾಶವಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡಬೇಕಾಗಿದೆ. ಅದರಂತೆ ಆದೇಶ ಮಾರ್ಪಾಡು ಮಾಡಲಾಗಿದೆ ಎಂದು ಹೇಳಿದೆ.
ಪ್ರಕರಣದ ಹಿನ್ನೆಲೆ
ದೂರುದಾರ ಮಹಿಳೆ ಶಿರಸಿ ಸಮೀಪದ ಅಲವಳ್ಳಿಯವರು. ಆಕೆ ಕುಮಾರಸ್ವಾಮಿ ಎಂಬುವರನ್ನು 2011ರಲ್ಲಿವಿವಾಹ-ವಾಗಿದ್ದರು. ಪತಿ ಪುಣೆಯಲ್ಲಿಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಮೂರೂವರೆ ವರ್ಷದ ಸೃಜಯ ಎಂಬ ಪುತ್ರನಿದ್ದನು. ಆಕೆ ತನ್ನ ತವರು ಮನೆಗೆ ಬಂದಾಗಲೆಲ್ಲಾ ಮೂಲೆಗದ್ಡೆ ಮಠಕ್ಕೆ ಬರುವುದು ವಾಡಿಕೆ. ಅದೇ ರೀತಿ 2017ರ ಏ.8ರಂದು ಆಕೆ ಮಗನೊಡನೆ ಹೊಸ ಸ್ವಾಮೀಜಿಯ ಪೀಠಾರೋಹಣ ಕಾರ್ಯಕ್ರಮದ ಸಲುವಾಗಿ ಮಠಕ್ಕೆ ಭೇಟಿ ನೀಡಿದ್ದರು. ಅದೇ ಮಠದಲ್ಲಿಆರೋಪಿ ರುದ್ರೇಶ್ ಕೆಲಸ ಮಾಡುತ್ತಿದ್ದ.
ಆಕೆ ತನ್ನ ತಾಯಿ ಮಗನೊಂದಿಗೆ ಏ.10ರಂದು ರಾತ್ರಿ ಮಠದಲ್ಲಿಯೇ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮಗು ಕಾಣೆಯಾಗಿತ್ತು. ನಂತರ ಹುಡುಕಾಟ ನಡೆಸಿದಾಗ ಮಗುವಿನ ದೇಹ ಪತ್ತೆಯಾಯಿತು. ಬಳಿಕ ತನಿಖೆಯ ವೇಳೆ ಆರೋಪಿ ಹಿಂದಿನ ದಿನ ರಾತ್ರಿ ಸಾಂಬಾರ್ನಲ್ಲಿ ನಿದ್ರೆ ಮಾತ್ರೆ ಸೇರಿಸಿಕೊಟ್ಟಿದ್ದ ಸಂಗತಿ ಬಯಲಾಗಿತ್ತು. ಬಳಿಕ ಗಾಢ ನಿದ್ರೆಯಲ್ಲಿದ್ದ ಮಗುವನ್ನು ಅಪಹರಿಸಿ-ಕೊಂಡು ಹೋಗಿ ಕೊಳದಲ್ಲಿ ಮುಳುಗಿಸಿ ಕೊಲ್ಲಲಾಗಿತ್ತು. ಆರೋಪಿ ಒಡವೆ ವಸ್ತುಗಳನ್ನು ಕದಿಯುತ್ತಿದ್ದ. ಆ ಕುರಿತು ಮಹಿಳೆ ಬುದ್ಧಿವಾದ ಹೇಳಿದ್ದರಿಂದ ಆಕೆಯ ಬಗ್ಗೆ ಆರೋಪಿ ದ್ವೇಷ ಬೆಳೆಸಿಕೊಂಡು ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.
