ದೆಹಲಿ : ಪ್ರಸಿದ್ಧ ಲೇಖಕಿ ಆರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ಸ್ ಟು ಮಿ’ ಪುಸ್ತಕದ ಮಾರಾಟ, ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ನಿ ಅವರಿದ್ದ ದ್ವಿಸಭಾ ನ್ಯಾಯಪೀಠವು ಈ ಪ್ರಕರಣವನ್ನು ವಿಚಾರಿಸಿ, ಹೈಕೋರ್ಟ್ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜಸಿಂಹನ್ ಎಂಬವರು, ಪುಸ್ತಕದ ಮುಖಪುಟದಲ್ಲಿ ಆರುಂಧತಿ ರಾಯ್ ‘ಬೀಡಿ’ ಅಥವಾ ‘ಸಿಗರೇಟ್’ ಸೇದುತ್ತಿರುವ ಚಿತ್ರವನ್ನು ಬಳಸಿರುವುದು ಕಾನೂನುಬಾಹಿರ ಎಂದು ಆರೋಪಿಸಿ ಕೇರಳ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ವಸ್ತ್ರಚಿತ್ರವು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ–2003ರ ಕಲಂ 5 ಉಲ್ಲಂಘನೆ ಮಾಡುತ್ತದೆ ಎಂದು ಅವರ ವಾದ.
ಇದನ್ನು ಓದಿ: GOOD NEWS: ಶಿಕ್ಷಕರಿಗೆ ಸಿಹಿ ಸುದ್ದಿ: 5ನೇ ತರಗತಿವರೆಗಿನ ಶಿಕ್ಷಕರಿಗೆ ‘ಟಿಇಟಿ’ ವಿನಾಯಿತಿ: ಸಂಪುಟ ಸಭೆ ಅಧಿಕೃತ ನಿರ್ಣಯ..!
ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ನಂತರ, ಅವರು ಸುಪ್ರೀಂ ಕೋರ್ಟ್ ಮೊರೆ ಹೋದರು. ವಿಚಾರಣೆ ವೇಳೆ, “ಪುಸ್ತಕದ ಮುಖಪುಟದಲ್ಲಿ ಕಂಡುಬರುವ ಚಿತ್ರವು ಸಾರ್ವಜನಿಕ ಜಾಹೀರಾತು ಅಥವಾ ಹೋರ್ಡಿಂಗ್ ಅಲ್ಲ. ಪುಸ್ತಕವನ್ನು ಖರೀದಿಸಿ ಓದುವವರು ಮಾತ್ರ ಅದನ್ನು ನೋಡುವರು. ಲೇಖಕಿ ಸಿಗರೇಟ್ ಪ್ರಚಾರ ಮಾಡುತ್ತಿರುವುದಿಲ್ಲ” ಎಂದು ನ್ಯಾಯಪೀಠ ಸ್ಪಷ್ಟನೆ ನೀಡಿತು.
ಪೀಠವು, “ಲೇಖಕಿ ಆರುಂಧತಿ ರಾಯ್ ಹಾಗು ಪ್ರಕಾಶಕರಾದ ಪೆಂಗ್ವಿನ್ ಹ್ಯಾಮಿಶ್ ಹ್ಯಾಮಿಲ್ಟನ್ ಅವರು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ” ಎಂದು ಹೇಳಿ, ಹೈಕೋರ್ಟ್ ತೀರ್ಪು ಸಮಂಜಸ ಎನ್ನುವ ಮೂಲಕ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿತು.
ಈ ಪುಸ್ತಕ ಆರುಂಧತಿ ರಾಯ್ ಅವರ ಆತ್ಮಚರಿತ್ರೆಯ ಸಂಗ್ರಹವಾಗಿದ್ದು, ವಿವಾದದ ನಡುವೆಯೂ ಸುಪ್ರೀಂ ಕೋರ್ಟ್ ಅವರ ಪರ ತೀರ್ಪು ನೀಡಿದೆ.
