ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಆಟೋ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಸಂಭವಿಸಿದೆ.
ಮಲಸಾವರ ರಸ್ತೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಹಮದ್ ಅಲಿ ಅವರಿಗೆ ಸೇರಿದ KA-46-7121 ನಂಬರ್ನ ಆಟೋ ಮೇಲೆ, ಏಕಾಏಕಿ ಬಂದ ಎರಡು ಕಾಡುಕೋಣಗಳಲ್ಲಿ ಒಂದು ದಾಳಿ ಮಾಡಿದೆ. ಕಾಡುಕೋಣ ಗುದ್ದಿದ ರಭಸಕ್ಕೆ ಆಟೋ ತಂತಿ ಬೇಲಿಯನ್ನು ದಾಟಿ ವಾಲಿದ್ದು, ರಸ್ತೆಯಲ್ಲಿ ಆತಂಕ ಸೃಷ್ಟಿಯಾಯಿತು.
ಈ ದಾಳಿಯಲ್ಲಿ ಆಟೋದಲ್ಲಿದ್ದ ಮಹಿಳಿಗೆ ಗಂಭೀರ ಗಾಯಗಳಾಗಿದ್ದು, ಆಟೋ ಚಾಲಕ ಮಹಮದ್ ಅಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾಡುಕೋಣಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಯಭೀತರಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
