ಟಿ.ನರಸೀಪುರ : ಬ್ರಿಟಿಷರ ದಾಸದಿಂದ ಭಾರತೀಯರನ್ನು ಮುಕ್ತಿಗೊಳಿಸಲು ನೂರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವವನ್ನು ಬಲಿದಾನ ಗೈದಿದ್ದಾರೆ. ಅಂತಹ ತ್ಯಾಗಜೀವಿಗಳ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ತಿಳಿಸಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಪೊಲೀಸ್ ಪರೇಡ್ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ತಂದು ಕೊಡುವುದಕ್ಕೆ ಸಾವಿರಾರು ಹೋರಾಟಗಾರರು ಅಹರ್ನಿಸಿ ದುಡಿದಿದ್ದಾರೆ. ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ನಾಥ ತಿಲಕ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತಿತರ ನೂರಾರು ಮಹಾನ್ ನಾಯಕರ ಹೋರಾಟದ ಫಲವೇ ಇಂದು ನಮ್ಮ ಸಂಭ್ರಮದ ಆಚರಣೆಗೆ ಕಾರಣವಾಗಿದೆ ಎಂದರು.
ಮುಖ್ಯ ಭಾಷಣಕಾರ ಮೂಗೂರು ಇಂದಿರಾ ಗಾಂಧಿ ವಸತಿ ಶಾಲೆಯ ಅಧ್ಯಾಪಕ ಡಾ.ಎನ್.ಸುರೇಶ್ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸುವುದು ಅತ್ಯಗತ್ಯ. ಸ್ವಾತಂತ್ರ್ಯ ನಂತರ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿದ ಡಾ.ಬಿ.ಆರ್ .ಅಂಬೇಡ್ಕರ್ ಅವರ ಪಾತ್ರವೂ ಸರಣಿಯ ಎಂದರಲ್ಲದೆ. ಸಿಪಾಯಿ ದಂಗೆಯಿಂದ ಆರಂಭವಾದ ಸ್ವಾತಂತ್ರ್ಯ ಹೋರಾಟದ ಘಟ್ಟಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಸಮಾಜ ಸೇವಕ ಜಿ.ಅರವಿಂದ, ಕರಾಟೆ ಚಾಂಪಿಯನ್ ಶಿಪ್ ಕ್ರೀಡಾಪಟು ನಯನ, ಹಿರಿಯ ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ, ಸಾವಯವ ಕೃಷಿಕ ಲೋಕೇಶ್, ತಬಲ ವಾದಕ ಎಂ.ಮೂರ್ತಿ, ಡ್ರಾಮಾ ಮಾಸ್ಟರ್ ಜಿ.ಕೆ.ಮಾದೇವಯ್ಯ, ಪ್ರಗತಿಪರ ರೈತ ರೇಚಣ್ಣ ಹಾಗೂ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು. ಬಳಿಕ ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳಿಗೆ ನೃತ್ಯ ಹಾಗೂ ಸನ್ನಿವೇಶಗಳಿಗೆ ನಟನೆಯನ್ನು ಪ್ರದರ್ಶಿಸಿದರು. ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ನೇತೃತ್ವದಲ್ಲಿ ನಡೆದ ಪೊಲೀಸ್ ಪಥ ಸಂಚಲನ ಎಲ್ಲರ ಗಮನ ಸೆಳೆಯಿತು.
ತಾ.ಪಂ ಇಓ ಪಿ.ಎಸ್.ಅನಂತರಾಜು, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಜಿ.ಪಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಪಿ.ಎನ್.ಚರಿತ, ಕೆ.ಶಿವರಾಜು, ಲೋಕೋಪಯೋಗಿ ಎ ಇ ಇ ಸತೀಶ್ ಚಂದ್ರನ್, ಪುರಸಭೆ ಸದಸ್ಯರಾದ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಎನ್.ಸೋಮಣ್ಣ, ಎಂ.ಸಿದ್ದು, ಎಲ್.ಮಂಜುನಾಥ್, ಗುರುಸ್ವಾಮಿ, ನಾಗರಾಜು, ಪ್ರಭಾರ ಮುಖ್ಯಾಧಿಕಾರಿಗಳಾದ ಕೆ.ಸಿ.ತ್ರಿವೇಣಿ, ಡಿ.ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಕೆ.ರವಿಕುಮಾರ್, ಯೋಜನಾಧಿಕಾರಿ ರಂಗಸ್ವಾಮಿ, ಸಹಾಯಕ ನಿರ್ದೇಶಕರಾದ ಸುಹಾಸಿನಿ, ಶಾಂತ, ಶ್ವೇತ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಸಿಆರ್ ಪಿ ನಾಗೇಶ್, ಶಿರಸ್ತೇದಾರ್ ಮಂಜುಳಾ, ಆರ್ ಐ ಮಹೇಂದ್ರ, ಎಸ್.ನಿತಿನ್, ಮುಖಂಡರಾದ ಬಿ.ಪಿ.ಪರಶಿವಮೂರ್ತಿ, ಕಿರಗಸೂರು ಶಂಕರ್, ಮೂಗೂರು ಸಿದ್ದರಾಜು, ಸಿ. ಪುಟ್ಟಮಲ್ಲಯ್ಯ, ಸಿ.ಪುಟ್ಟಯ್ಯ, ತ್ರಿವೇಣಿನಗರ ಮಹದೇವಮ್ಮ, ಕುಪ್ಯ ಜಯರಾಮ್, ಹಾಗೂ ಇತರರು ಇದ್ದರು.
ಎಂ.ನಾಗೇಂದ್ರಕುಮಾರ್
