ಶ್ಲೋಕ – 45
ಪ್ರಯತ್ನಾದ್ ಯತಮಾನಸ್ತು ಯೋಗೀ ಸಂಶುದ್ಧಕಿಲ್ಬಿಷಃ ।
ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್ ॥೪೫॥
ಉಚ್ಚಾರಣೆ- ಪ್ರಯತ್ನಾತ್ ಯತಮಾನಃ ಟು ಯೋಗೀ ಸಂಶುದ್ಧ ಕಿಲ್ಬಿಷಃ ।
ಅನೇಕ ಜನ್ಮಸಂಸಿದ್ಧಃ ತತಃ ಯಾತಿ ಪರಾಮ್ ಗತಿಮ್-
ಧ್ಯಾನದಲ್ಲಿ ತೊಡಗುವ ಸಾಧಕ ಪ್ರಯತ್ನದ ಫಲವಾಗಿ ಬಗೆಯ ಕಿಲುಬು ಕಳೆದುಕೊಂಡು ಅನೇಕ ಜನ್ಮಗಳ ಸಾಧನೆಯಿಂದ ಸಿದ್ಧಿ ಪಡೆದು ಹಿರಿಯ ನೆಲೆಯಾದ ಭಗವಂತನನ್ನು ಸೇರುತ್ತಾನೆ.
ಹಿಂದೆ ಹೇಳಿದಂತೆ ನಮ್ಮ ಸಾಧನೆ ಅನೇಕ ಜನ್ಮಗಳದ್ದು. ಮೊದಲು ನಮ್ಮಲ್ಲಿ ಇಚ್ಛೆ ಹುಟ್ಟಿತು, ಅದರಿಂದ ಆ ಇಚ್ಛೆ ಪೂರ್ಣವಾಗುವ ವಾತವರಣವನ್ನು ಮುಂದಿನ ಜನ್ಮದಲ್ಲಿ ಭಗವಂತ ಕೊಟ್ಟ, ಅಲ್ಲಿ ಪ್ರಯತ್ನ ಮಾಡಿ ಒಳಗಿನ ಕೊಳೆ ತೊಳೆಯಿತು, ಸಾಧನೆಯಿಂದ ಸ್ವಚ್ಛವಾದ ಜ್ಞಾನ ಬಂತು. ಈ ಜ್ಞಾನ ಮತ್ತು ಸಾಧನೆಯಿಂದ ಅನೇಕ ಜನ್ಮಗಳ ನಂತರ ಶಬ್ದಬ್ರಹ್ಮನನ್ನು ಮೀರಿ ಭಗವಂತನನ್ನು ಕಾಣಲು ಸಾಧ್ಯ. ಹೀಗೆ ಅಂತರಂಗದಲ್ಲಿ ಉತ್ಕಟವಾದ ಕಳಕಳಿ ಉಳ್ಳ ಜಿಜ್ಞಾಸು ಶಾಸ್ತ್ರ ಪಂಡಿತರನ್ನು ಮೀರಿ ಮೋಕ್ಷವನ್ನು ತಲುಪಬಲ್ಲ.
ಸಾಧನೆಯಲ್ಲಿ ಬಹಳ ಮುಖ್ಯವಾದದ್ದು ಅಂತರಂಗ ಪ್ರಪಂಚದ ಸಾಧನೆ. ಹೊರಗಡೆ ಸ್ನಾನ, ಪೂಜೆ, ಹೋಮ, ಹವನ, ಏನೇ ಮಾಡಿದರೂ ಕೂಡಾ ಅದಕ್ಕಿಂತ ಮಿಗಿಲಾದದ್ದು ಅಂತರಂಗ ಪ್ರಪಂಚ.
