ತುಮಕೂರು- ನಗರದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯುನೈಟೆಡ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಬ್ಲಸೆಟ್ ತುಮಕೂರು ಸಂಸ್ಥೆ ವತಿಯಿಂದ ವಿಶೇಷವಾಗಿ ಏಸುಕ್ರಿಸ್ತನ ಸಂದೇಶವನ್ನು ಸಾರುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.
ನಗರದ ಟೌನ್ಹಾಲ್ ವೃತ್ತದಲ್ಲಿ ಕ್ರಿಸ್ಮಸ್ ಹಬ್ಬ ಮತ್ತು ಏಸುಕ್ರಿಸ್ತನ ಸಂದೇಶವನ್ನು ಸಾರಲು ನಗರದ ಸುಮಾರು 50ಕ್ಕೂ ಹೆಚ್ಚು ಚರ್ಚ್ ಗಳ ಪ್ರತಿನಿಧಿಗಳು ಮತ್ತು ಸದಸ್ಯರು ಸೇರಿ ಕ್ರಿಸ್ಮಸ್ ಆಚರಿಸಿದರು.
ಟೌನ್ಹಾಲ್ ವೃತ್ತದಲ್ಲಿ ಮಾಜಿ ಶಾಸಕ ಡಾ. ಎಸ್.ರಫೀಕ್ ಅಹಮದ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅಹಮದ್ ಅವರು ಕೇಕ್ ಕತ್ತರಿಸುವ ಮೂಲಕ ನೆರೆದಿದ್ದ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು.
ನಗರದ ಟೌನ್ಹಾಲ್ ವೃತ್ತ, ಚರ್ಚ್ ಸರ್ಕಲ್ ವೃತ್ತ ಹಾಗೂ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ನಾಟಕ ಹಾಗೂ ಹಾಡುಗಳ ಮೂಲಕ ಏಸುಕ್ರಿಸ್ತನ ಶಾಂತಿ ಸಂದೇಶವನ್ನು ಸಾರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ 15 ಅಂಶಗಳ ಅಲ್ಪಸಂಖ್ಯಾತರ ಘಟಕದ ತುಮಕೂರು ಜಿಲ್ಲೆಯ ಸದಸ್ಯರಾದ ಜಫಿನ್ ಜಾಯ್ ಅವರು ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿ, ಯಾವುದೇ ಜಾತಿ, ಕುಲ, ಗೋತ್ರ ಇಲ್ಲದೆ ಎಲ್ಲರೂ ಸಹಬಾಳ್ವೆಯಿಂದ ಬದುಕು ನಡೆಸುವ ಮೂಲಕ ಶಾಂತಿಯನ್ನು ಕಾಪಾಡಬೇಕು ಎಂದು ಹೇಳಿದರು.
ಮರಣ ಎನ್ನುವುದು ಯೇಸುವಿನ ಜೀವಿತದಲ್ಲಿ ಕೊನೆಯಲ್ಲ, ಆತ ಸತ್ತ ಮೂರನೇ ದಿನ ಪುನರುತ್ಥಾನನಾದನು. ಪುನರುತ್ಥಾನದ ನಂತರ ತನ್ನ ಶಿಷ್ಯರಿಗೆ ಪ್ರತ್ಯಕ್ಷನಾದನು. ಪುನರುತ್ಥಾನವಾದ 40 ದಿನಗಳ ನಂತರ ಯೇಸು ಸ್ವರ್ಗಾರೋಹಣನಾದನು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುನೈಟೆಡ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಯು.ಜಿ. ಜಾಯ್ ಕುಟ್ಟಿ, ಪಾಸ್ಟರ್ ಮತ್ಯಾಸ್, ರಾಬಿನ್ಸನ್, ದೇವರಾಜು ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
