ನವದೆಹಲಿ: ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ, 1947ರಡಿ ಬರುವ ‘ಇಂಡಸ್ಟ್ರಿ’ (ಕೈಗಾರಿಕೆ) ಎಂಬ ಪದದ ವ್ಯಾಖ್ಯಾನದ ಕುರಿತ ಮಹತ್ವದ ಪ್ರಕರಣದ ವಿಚಾರಣೆಯನ್ನು ಮಾ.17ರಿಂದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠ ಕೈಗೆತ್ತಿಕೊಳ್ಳಲಿದೆ ಎಂದು ಭಾರತ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.
ಈ ಸಂಬಂಧ ಪಕ್ಷಗಳು ಫೆಬ್ರವರಿ 28ರೊಳಗಾಗಿ ತಮ್ಮ ಲಿಖಿತ ವಾದಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ‘ಇಂಡಸ್ಟ್ರಿ’ ಪದದ ವ್ಯಾಪ್ತಿಗೆ ಯಾವ ಸಂಸ್ಥೆಗಳು ಅಥವಾ ಚಟುವಟಿಕೆಗಳು ಸೇರುತ್ತವೆ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ವಿಸ್ತೃತ ಪೀಠ ವಿಚಾರಣೆ ನಡೆಯಲಿದೆ.
1978ರ ಬೆಂಗಳೂರು ನೀರು ಸರಬರಾಜು ಮಂಡಳಿ ವಿರುದ್ಧ ಎ. ರಾಜಪ್ಪ ಪ್ರಕರಣದಲ್ಲಿ ನ್ಯಾಯಮೂರ್ತಿಯಾಗಿದ್ದ ವಿ.ಆರ್. ಕೃಷ್ಣ ಅಯ್ಯರ್ ನೀಡಿದ ತೀರ್ಪಿನ ಕೆಲವು ಅಂಶಗಳನ್ನು ವಿಸ್ತೃತ ಪೀಠ ಮರುಪರಿಶೀಲನೆ ಮಾಡಲಿದೆ. ವಿಶೇಷವಾಗಿ, ಸರ್ಕಾರಿ ಇಲಾಖೆಗಳು ಕೈಗೊಳ್ಳುವ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ಕೈಗಾರಿಕಾ ಚಟುವಟಿಕೆಗಳೆಂದು ಪರಿಗಣಿಸಬಹುದೇ ಎಂಬ ಪ್ರಮುಖ ಪ್ರಶ್ನೆಯ ಮೇಲೂ ನ್ಯಾಯಪೀಠ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಈ ಪ್ರಕರಣದ ತೀರ್ಪು ಭವಿಷ್ಯದಲ್ಲಿ ಕಾರ್ಮಿಕ ಕಾನೂನುಗಳ ಅನ್ವಯಿಕತೆಗೆ ಹಾಗೂ ಸರ್ಕಾರಿ ಸಂಸ್ಥೆಗಳ ಕಾರ್ಯವ್ಯಾಪ್ತಿಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
