ಕೆ.ಆರ್.ಪೇಟೆ: ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದ್ದು ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದಾಗಿದೆ. ಧರ್ಮ ಪ್ರಭು ಏಸು ಕ್ರಿಸ್ತನು ಲೋಕ ಕಲ್ಯಾಣಕ್ಕಾಗಿ ಶಿಲುಬೆಗೇರಿದ ಈ ದಿನವನ್ನು ಶುಭ ಶುಕ್ರವಾರವನ್ನಾಗಿ ವಿಶ್ವದಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ಕೆ.ಆರ್.ಪೇಟೆಯ ಬಾಲ ಏಸು ದೇವಾಲಯದ ಧರ್ಮಗುರು ಫಾದರ್ ಫೌಲ್ವಿಸ್ ಥಾಮಸ್ ಹೇಳಿದರು.
ಅವರು ಇಂದು ಪಟ್ಟಣದ ಬಾಲ ಯೇಸು ದೇವಾಲಯದಲ್ಲಿ ಗುಡ್ ಫ್ರೈಡೇ ದಿನದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದರು.
ಕರುಣಾಮಯಿ ಯಾಗಿರುವ ಯೇಸು ಕ್ರಿಸ್ತನು ಶಿಲುಬೆಗೇರಿದರೂ ಕೂಡ ತನಗೆ ತೊಂದರೆ ನೀಡಿದವರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದನು. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲಾ ಜಾತಿ ವರ್ಗಗಳ ಜನರು ತಾವು ಪೂಜಿಸುವ ದೇವರನ್ನು ಆರಾಧಿಸುತ್ತಾ ಎಲ್ಲರೊಳಗೆ ಒಂದಾಗಿ ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ.
ನಾಗರೀಕ ಸಮಾಜದ ಎಲ್ಲರೊಳಗಿನ ದುಃಖಗಳು ಹಾಗೂ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಂತೋಷದಿಂದ ಜೀವನ ನಡೆಸಿ ಎಂಬ ಸಂದೇಶವನ್ನು ನಮ್ಮ ಪವಿತ್ರ ಗ್ರಂಥವಾದ ಬೈಬಲ್ ಹೇಳುತ್ತದೆ. ಅಂತೆಯೇ ಭಾರತ ದೇಶದಲ್ಲಿ ಕ್ರೈಸ್ತ ಧರ್ಮದ ಬಂಧುಗಳು ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿ ಹೆಚ್ಚಾಗುವಂತೆ ಎಲ್ಲಾ ಜಾತಿ ವರ್ಗಗಳ ಜನರೊಂದಿಗೆ ಒಂದಾಗಿ ಜೀವನ ನಡೆಸುತ್ತ ಸಂವಿಧಾನದ ಶ್ರೇಷ್ಠತೆಯನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ ಎಂದು ಫಾದರ್ ಪೌಲ್ವಿಸ್ ಥಾಮಸ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ರೆವೆರೆಂಡ್ ಫಾದರ್ ಆಂಥೋನಿ ಸ್ಟೀಫನ್, ಸಿಸ್ಟರ್ ರುಫಿನ್ ಡಿಸೋಜಾ, ಟೀನಾ, ಜೋಸಲಿನ್, ಆಂಥೋನಿಸ್ವಾಮಿ, ಎಡ್ವಿನ್, ಅಲ್ಮೆಡಾ, ಮೋಸಸ್, ಯೋಸಯ್ಯ, ದೊರೈರಾಜ್, ಲಿಯೊ, ಸೈಮನ್, ಮೆಂಡೋನ್ಸ, ಟಿ.ಪ್ರಕಾಶ್, ಪರಮೇಶ್, ಜಿನ್ ಮಂಜು, ನಿರ್ಮಲರಾಣಿ, ಈಡಲ್, ಕಾಟೇಜ್ ಶಾಲೆಯ ಮುಖ್ಯ ಶಿಕ್ಷಕಿ ಎಡ್ವಿನ್ ಕ್ವಾಡ್ರಸ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
