ಬೆಂಗಳೂರು (ಏ 6 ):ಸಾಮಾನ್ಯ ಆರೋಗ್ಯ ತೊಂದರೆಗಳಂತೆ ಕಾಣುವ ನಿರಂತರ ಹೊಟ್ಟೆ ನೋವು, ಜೀರ್ಣಕ್ರಿಯೆ ಸಮಸ್ಯೆಗಳು, ಕಾರಣವಿಲ್ಲದ ತೂಕ ಇಳಿಕೆ, ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳ ಮುನ್ಸೂಚನೆಗಳಾಗಿರಬಹುದು. ಇಂತಹ ಸಂದರ್ಭಗಳಲ್ಲಿ ನಿಖರವಾದ ರೋಗನಿರ್ಣಯ ಮತ್ತು ಸಮಗ್ರ ಚಿಕಿತ್ಸೆಗೆ ಬಹುಶಿಸ್ತೀಯ (multidisciplinary) ದೃಷ್ಠಿಕೋನ ಅಗತ್ಯವಾಗುತ್ತದೆ. ಇತ್ತೀಚಿಗೆ *ಮಣಿಪಾಲ್ ಆಸ್ಪತ್ರೆ ಯಲಹಂಕ*ದಲ್ಲಿ, ದಾಖಲಾದ *ಅತ್ಯಂತ ಸಂಕೀರ್ಣವಾದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್* ಮತ್ತು ಅದರ ಯಶಸ್ವಿ ನಿರ್ವಹಣೆಗಾಗಿ ಅತ್ಯಾಧುನಿಕ, ಕಡಿಮೆ ಆಘಾತಕಾರಿ ವಿಧಾನವಾದ (ಮಿನಿಮಲ್ಲಿ ಇನ್ವೆಸಿವ್) ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ (EUS) ಮಾರ್ಗದರ್ಶಿತ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ (RFA) ನ ಬಳಕೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಈ ಮಹತ್ವದ ಶಸ್ತ್ರಚಿಕಿತ್ಸೆಗೆ ಬಗ್ಗೆ ತಿಳಿಸಲು, ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿಯ ಮುಖ್ಯ ಸಲಹೆಗಾರರಾದ *ಡಾ. ಶ್ರೀನಿವಾಸ ಡಿ ಮತ್ತು ಮೆಡಿಕಲ್ ಆಂಕಾಲಜಿ, ಹೀಮಾಟೋ-ಆಂಕಾಲಜಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟೇಶನ್ ವಿಭಾಗದ ಮುಖ್ಯ ಸಲಹೆಗಾರರಾದ ಡಾ. ಪ್ರಸಾದ್ ನಾರಾಯಣನ್* ರವರ ನೇತೃತ್ವದಲ್ಲಿ ಮಣಿಪಾಲ್ ಆಸ್ಪತ್ರೆ ಯಲಹಂಕದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದರ ವೈದ್ಯರು ಇದು ಕರ್ನಾಟಕದಲ್ಲೇ ಈ ರೀತಿಯ ಮೊದಲ ಪ್ರಕರಣವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದರು.
66 ವರ್ಷದ ಶ್ರೀಮತಿ ಸೀತಮ್ಮ ಕೆ. ಅವರು ಕಳೆದ ಎರಡು ತಿಂಗಳುಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ನರಳುತ್ತಿದ್ದರು. ಕಾರಣವಿಲ್ಲದೆಯೇ ತೂಕ ಇಳಿಕೆ ಮತ್ತು ಇತ್ತೀಚೆಗೆ ಪತ್ತೆಯಾದ ಮಧುಮೇಹ ಅವರ ಅರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಜಟಿಲವಾಗಿಸಿದ್ದವು. ಪ್ರಾರಂಭದಲ್ಲಿ ಬೇರೆಡೆ ನಡೆಸಿದ ಪರೀಕ್ಷೆಗಳು *ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ (ದೀರ್ಘಕಾಲದ ಮೇದೋಜೀರಕ ಗ್ರಂಥಿಯ ಸೋಂಕು ಮತ್ತು ಊತ)* ಎಂದು ಸೂಚಿಸಿತ್ತು. ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಮರುಪರಿಶೀಲನೆ ಹಾಗೂ ಅಲ್ಟ್ರಾಸೌಂಡ್ ಸೇರಿದಂತೆ ಹೆಚ್ಚಿನ ಇಮೇಜಿಂಗ್ ಪರೀಕ್ಷೆಗಳು ನಡೆಸಿದಾಗ ಕ್ಯಾನ್ಸರ್ ಇರುವ ಸಾಧ್ಯತೆ ಮೇಲೆ ಅನುಮಾನ ಮೂಡಿತು.
ವಿಸ್ತೃತ ಪರೀಕ್ಷೆಗಳು ಕ್ರಾನಿಕ್ ಪ್ಯಾಂಕ್ರಿಯಾಟೈಟಿಸ್ ಹಿನ್ನೆಲೆಯಲ್ಲೇ, *ಪ್ಯಾಂಕ್ರಿಯಾಸ್ (ಮೇದೋಜೀರಕ ಗ್ರಂಥಿ)ಯಲ್ಲಿ ಕ್ಯಾನ್ಸರ್* ಇರುವುದನ್ನು ದೃಢಪಡಿಸಿತು. ಕ್ಯಾನ್ಸರ್ ಗೆಡ್ಡೆಯು ಹತ್ತಿರದ ಮತ್ತು ಹೊಟ್ಟೆಯ ಭಾಗದ ಪೋರ್ಟಲ್ ವೆನ್ ಮತ್ತು ಸೂಪೀರಿಯರ್ ಮೆಸೆಂಟೆರಿಕ್ ಆರ್ಟರಿ ಮೊದಲಾದ ಪ್ರಮುಖ ರಕ್ತನಾಳಗಳನ್ನು ಒಳಗೊಂಡಿತ್ತು. ಜೊತೆಗೆ ಗೆಡ್ಡೆಯು ಪಿತ್ತನಾಳದಲ್ಲಿ ಅಡತಡೆ ಉಂಟಾಗಿ ಕಾಮಾಲೆ (ಜಾಂಡಿಸ್) ಸಹ ಕಾಣಿಸಿಕೊಂಡಿತ್ತು.
ಚಿಕಿತ್ಸೆಗೆ ಅಡಿಪಾಯವಾದ ನಿಖರ ನಿರ್ಣಯದ ಕುರಿತು ಡಾ. ಶ್ರೀನಿವಾಸ ಡಿ ಅವರು “ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಕಷ್ಟಕರ. ಇದರ ಲಕ್ಷಣಗಳು ಸಾಮಾನ್ಯ ಕಾಯಿಲೆಗಳೊಂದಿಗೆ ಹೋಲಿಕೆಯಾಗುತ್ತವೆ. ಆದರೆ ಈ ಪ್ರಕರಣದಲ್ಲಿ ನಮ್ಮ ರೇಡಿಯಾಲಜಿ ತಂಡವು ಆರಂಭದಲ್ಲೇ ಕ್ಯಾನ್ಸರ್ನ ಸೂಚನೆಗಳನ್ನು ಗುರುತಿಸಿದ ಪರಿಣಾಮ, ಸಮಯೋಚಿತ ಮತ್ತು ಸಮಗ್ರ ಚಿಕಿತ್ಸೆ ಸಾಧ್ಯವಾಯಿತು,” ಎಂದು ಹೇಳಿದರು.
ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಗೆ ಅಸಾಧ್ಯವಾದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ಗಳಿಗೆ ಚಿಕಿತ್ಸೆ ಆಯ್ಕೆಗಳು ಮುಖ್ಯವಾಗಿ ಪ್ಯಾಲಿಯೇಟಿವ್ ಚಿಕಿತ್ಸೆ, ERCP ಮೂಲಕ ಕಾಮಾಲೆ ನಿವಾರಣೆ, ನೋವು ನಿಯಂತ್ರಣ ಮತ್ತು ಬದುಕಿನ ಅವಧಿ ವೃದ್ಧಿಗೆ ಕಿಮೋಥೆರಪಿಗೆ ಸೀಮಿತವಾಗಿವೆ. ಆದರೆ ಇವು ರೋಗಿಯ ನೋವನ್ನು ಸಮರ್ಪಕವಾಗಿ ನಿಯಂತ್ರಿಸಲು ಅಥವಾ ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ ಅಷ್ಟಾಗಿ ಸಹಕರಿಸುವುದಿಲ್ಲ. ಹಾಗಾಗಿ, ಶ್ರೀಮತಿ ಸೀತಮ್ಮ ಅವರ ಚಿಕಿತ್ಸೆಗೆ ವೈದ್ಯಕೀಯ ತಂಡವು ಸಮನ್ವಯಿತ, ಬಹುಶಾಸ್ತ್ರೀಯ ಚಿಕಿತ್ಸಾ ಮಾರ್ಗವೇ ಸೂಕ್ತ ಎಂದು ನಿಶ್ಚಯಿಸಿತು.
EUS ಮಾರ್ಗದರ್ಶಿತ ಫೈನ್ ನೀಡಲ್ ಆಸ್ಪಿರೇಶನ್ ಸೈಟಾಲಜಿ (FNAC) ಮತ್ತು ಗೆಡ್ಡೆಯ ಮೌಲ್ಯಮಾಪನದ ಮೂಲಕ ರೋಗನಿರ್ಣಯವನ್ನು ದೃಢಪಡಿಸಲಾಯಿತು. ನಂತರ ನೋವು ನಿವಾರಣೆಗೆ ಸಿಲಿಯಾಕ್ ಗ್ಯಾಂಗ್ಲಿಯನ್ ನ್ಯೂರೋಲೈಸಿಸ್ ಮಾಡಲಾಯಿತು. ಕ್ಯಾನ್ಸರ್ ಗೆಡ್ಡೆಯನ್ನು ಅನ್ನು ನೇರವಾಗಿ ಗುರಿಯಾಗಿಸಿ ನಾಶಗೊಳಿಸಲು EUS ಮಾರ್ಗದರ್ಶಿತ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ (RFA) ನೆರವೇರಿಸಲಾಯಿತು. ಜೊತೆಗೆ ಕಾಮಾಲೆ ನಿವಾರಣೆಗೆ ಬೈಲಿಯರಿ ಸ್ಟೆಂಟಿಂಗ್ ಕೂಡ ಮಾಡಲಾಯಿತು. ಗಮನಿಸಬೇಕಾದ ಅಂಶವೆಂದರೆ – ಈ ಎಲ್ಲ ಚಿಕಿತ್ಸಾ ಕ್ರಮಗಳನ್ನು ಒಂದೇ ಸೆಶನ್ ಹಾಗೂ ಒಂದೇ ಬಾರಿ ಅನೆಸ್ತೇಷಿಯಾ ಅಡಿ ಮಾಡಲಾಯಿತು.
ಈ ವಿಧಾನಗಳ ಮಹತ್ವವನ್ನು ವಿವರಿಸುತ್ತಾ ಡಾ. ಶ್ರೀನಿವಾಸ ಡಿ ಅವರು “ರೋಗನಿರ್ಣಯ, ನೋವು ನಿರ್ವಹಣೆ ಮತ್ತು ಟ್ಯೂಮರ್ ಅಬ್ಲೇಶನ್, ಈ ಮೂರು ಪ್ರಮುಖ ಹಂತಗಳನ್ನು ಒಂದೇ ವೇಳೆ ಪೂರ್ಣಗೊಳಿಸಲು ಸಾಧ್ಯವಾಯಿತು. ಇದರಿಂದ ರೋಗಿಗೆ ಪದೇ ಪದೇ ಚಿಕಿತ್ಸೆಗೆ ಒಳಗಾಗುವ ಭಾರ ಕಡಿಮೆಯಾಗುತ್ತದೆ, ಚೇತರಿಕೆ ವೇಗವಾಗುತ್ತದೆ ಮತ್ತು ಮುಂದಿನ ಚಿಕಿತ್ಸೆಯನ್ನು ಬೇಗ ಆರಂಭಿಸಲು ಸಾಧ್ಯವಾಗುತ್ತದೆ,” ಎಂದು ವಿವರಿಸಿದರು.
ಕ್ಯಾನ್ಸರ್ ಚಿಕಿತ್ಸಾ ದೃಷ್ಟಿಕೋನದಿಂದ ಮಾತನಾಡಿದ ಡಾ. ಪ್ರಸಾದ್ ನಾರಾಯಣನ್ ಅವರು, “ಈ ವಿಧಾನವು ಶಸ್ತ್ರಚಿಕಿತ್ಸೆಗೆ ಅಸಾಧ್ಯವಾದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿರ್ವಹಣೆಯಲ್ಲಿ ಹೊಸ ದಿಕ್ಕು ನೀಡುತ್ತದೆ. ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಮಾರ್ಗದರ್ಶಿತ ರೇಡಿಯೋಫ್ರೀಕ್ವೆನ್ಸಿ ಅಬ್ಲೇಶನ್ ಈ ರೀತಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ಕಡಿಮೆ ಆಘಾತಕಾರಿ ರೀತಿಯಲ್ಲಿ ಕ್ಯಾನ್ಸರ್ ಗೆಡ್ಡೆಯ ನಿಯಂತ್ರಣ ಸಾಧ್ಯವಾಗುವುದರಿಂದ ನೋವು ಕಡಿಮೆಯಾಗುತ್ತದೆ ಮತ್ತು ಕಿಮೋಥೆರಪಿ ಸೇರಿದಂತೆ ಇತರ ವ್ಯವಸ್ಥಿತ ಚಿಕಿತ್ಸೆಗೆ ಉತ್ತಮ ಪರಿಸ್ಥಿತಿ ಸೃಷ್ಟಿಯಾಗುತ್ತದೆ,” ಎಂದು ವಿವರಿಸಿದರು.
ವಿಪಲ್ (Whipple) ಶಸ್ತ್ರಚಿಕಿತ್ಸೆಯಂತಹ ಪ್ರಮುಖ ಆಪರೇಷನ್ಗಳು ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಸಾಧ್ಯವಾಗದೇ ಇರಬಹುದು ಮತ್ತು ಚೇತರಿಕೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ EUS ಮಾರ್ಗದರ್ಶಿತ RFA ವಿಧಾನವನ್ನು ಸಾಮಾನ್ಯವಾಗಿ ಸಿಡೇಶನ್ ಅಡಿಯಲ್ಲಿ ಎಂಡೋಸ್ಕೋಪಿಕ್ ಮೂಲಕ ನೆರವೇರಿಸಲಾಗುತ್ತದೆ ಮತ್ತು ರೋಗಿಗಳು ಇದನ್ನು ಸುಲಭವಾಗಿ ಸಹಿಸಿಕೊಳ್ಳುತ್ತಾರೆ.
EUS ಮಾರ್ಗದರ್ಶಿತ RFA ವಿಧಾನದ ಬಗ್ಗೆ ಇನ್ನಷ್ಟು ವಿವರಣೆ ನೀಡುತ್ತಾ ಡಾ. ಪ್ರಸಾದ್ ನಾರಾಯಣನ್ ಅವರು, “ಈ ವಿಧಾನವು ಪ್ಯಾಲಿಯೇಷನ್ ಮತ್ತು ಸಕ್ರಿಯ ಕಾಯಿಲೆ ನಿಯಂತ್ರಣದ ನಡುವಿನ ಅಂತರವನ್ನು ಭರಿಸುತ್ತದೆ. ರೋಗಿಗಳಿಗೆ ಕಡಿಮೆ ನೋವು, ಉತ್ತಮ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಉತ್ತಮ ಜೀವನ ಗುಣಮಟ್ಟ ಲಭ್ಯವಾಗುತ್ತದೆ. ಕಿಮೋಥೆರಪಿಯೊಂದಿಗೆ ಸಂಯೋಜಿಸಿದಾಗ, ಮುಂದುವರಿದ ಹಂತದಲ್ಲಿಯೂ ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇದೆ,” ಎಂದರು.
ಚಿಕಿತ್ಸಾ ಕ್ರಮಗಳ ನಂತರ ಶ್ರೀಮತಿ ಸೀತಮ್ಮ ಅವರ ಹೊಟ್ಟೆ ನೋವು ಗಮನಾರ್ಹವಾಗಿ ಕಡಿಮೆಯಾಗಿ, ಅನ್ಯ ರೋಗಲಕ್ಷಣಗಳಲ್ಲಿ ಒಟ್ಟಾರೆ ಸುಧಾರಣೆ ಕಂಡುಬಂದಿದೆ. ಮುಂದಿನ ಚಿಕಿತ್ಸೆ ಭಾಗವಾಗಿ ಈಗ ಕಿಮೋಥೆರಪಿ ಯೋಜಿಸಲಾಗುತ್ತಿದೆ, ಇದು ಬದುಕಿನ ಅವಧಿ ಹೆಚ್ಚಿಸಲು ಸಹಾಯಕವಾಗಲಿದೆ.
ಈ ಮೈಲುಗಲ್ಲಿನ ಸಾಧನೆಯೊಂದಿಗೆ, ಮಣಿಪಾಲ್ ಆಸ್ಪತ್ರೆ ಯಲಹಂಕ ಕಡಿಮೆ ಆಘಾತಕಾರಿ ಆಂಕಾಲಜಿ (ಮಿನಿಮಲ್ಲಿ ಇನ್ವೆಸಿವ್ ಆಂಕಾಲಜಿ) ಕ್ಷೇತ್ರದಲ್ಲಿ ಮುಂದಾಳತ್ವವನ್ನು ವಹಿಸುತ್ತಾ, ಸೀಮಿತ ಚಿಕಿತ್ಸಾ ಆಯ್ಕೆಗಳು ಇರುವ ಸಂಕೀರ್ಣ ಪರಿಸ್ಥಿತಿಗಳಲ್ಲಿ ರೋಗಿಯ ಬದುಕಿನ ಅವಧಿ ಮತ್ತು ಜೀವನ ಗುಣಮಟ್ಟ ಎರಡನ್ನೂ ಪ್ರಾಮುಖ್ಯತೆಯಿಂದ ಗಮನದಲ್ಲಿಟ್ಟುಕೊಂಡು ಹೊಸ ಪರಿಹಾರಗಳನ್ನು ನೀಡುತ್ತಿದೆ.
