ಹಾಸನ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ ಇವರ ವತಿಯಿಂದ ದಿನಾಂಕ : 26-4-2026 ರ ಭಾನುವಾರದಂದು ಮದ್ದೂರಿನ S L M ಕನ್ಪಿಷನ್ ಹಾಲ್ ನಲ್ಲಿ ನಡೆದ ಕರೋಕೆ ಗಾಯನ ಸ್ಪರ್ಧೆಯ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿ ಸಮ್ಮಾನಿಸಲಾಯಿತು.
ಹಾಸನದ ನಿವೃತ್ತ ಪ್ರಾಂಶುಪಾಲರಾದ ಎ. ಹೆಚ್ . ಗಣೇಶ್ ಅಂಕಪುರ ಮತ್ತು ಪ್ರಗತಿಪರ ರೈತರಾದ ಪುಟ್ಟಸ್ವಾಮಿಗೌಡ ಆರ್.ಕೆ. ಇವರಿಗೆ ರಾಜ್ಯ ಮಟ್ಟದ ಕಲಾರತ್ನ ಪ್ರಶಸ್ತಿ, ಹಾಗೂ ಆರ್. ಸಿ . ರಸ್ತೆಯಲ್ಲಿರುವ ಜಿ.ಜಿ.ಜೆ.ಸಿ. ಪ್ರಧಾನ ಪ್ರೌಢಶಾಲಾ ಶಿಕ್ಷಕರಾದ ಚಿದಾನಂದ ಕೆ.ಎನ್. ಇವರಿಗೆ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಹೆಚ್ . ಗಣೇಶ್ ಅಂಕಪುರ ರವರು ಈ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ ಇವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು, ಗಾಯಕರು, ಶಿಕ್ಷಕರು ಮುಂತಾದ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ. ಎಲ್ಲಾ ಸಾಧಕರನ್ನು ಅಭಿನಂದಿಸಿರುವದು ಸಂತಸ ತಂದಿದೆ. ಮುಂದೆಯೂ ಇದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಿ ಎಂದು ಶುಭ ಹಾರೈಸಿದರು. ಪ್ರಗತಿಪರ ರೈತರಾದ ಪುಟ್ಟಸ್ವಾಮಿ ಗೌಡ ರವರು ಮಾತನಾಡುತ್ತಾ ಇಂದು ಭೂಮಿಯನ್ನು ಉಳಿಸಬೇಕಿದೆ. ಕುಡಿಯುವ ನೀರು ಇಂದಿನ ಅತ್ಯಂತ ಅವಶ್ಯಕ ಬೇಡಿಕೆಯಾಗಿದ್ದು ನೀರಿನ ಮಹತ್ವವನ್ನು ಎಲ್ಲರೂ ಅರಿತು ಮುನ್ನೆಚ್ಚರಿಕೆ ವಹಿಸಿ ನೀರಿನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಶಿಕ್ಷಣ ಕ್ಷೇತ್ರದಿಂದ ಸನ್ಮಾನಿತರಾದ ಕೆ.ಎನ್ . ಚಿದಾನಂದರವರು ಮಾತನಾಡಿ ಆಧುನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣ ಅತ್ಯಗತ್ಯವಾಗಿದೆ. ಮಕ್ಕಳಲ್ಲಿ ಮೌಲ್ಯಗಳ ಅಳವಡಿಕೆಗೆ ಶಿಕ್ಷಕರು ಮತ್ತು ಪೋಷಕರು ಕೈಜೋಡಿಸಿ ವ್ಯಕ್ತಿತ್ವ ನಿರ್ಮಾಣ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಗುರುತಿಸುವುದರಿಂದ ಶಿಕ್ಷಕರನ್ನು ಮಾನಸಿಕವಾಗಿ ಪ್ರೇರೇಪಣೆ ನೀಡಿದಂತಾಗುತ್ತದೆ. ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚುತ್ತದೆ. ಇಂದಿನ ಈ ಪ್ರಶಸ್ತಿಯು ಭವಿಷ್ಯದ ಆದರ್ಶ ಕಾರ್ಯವೈಖರಿಗೆ ಸ್ಪೂರ್ತಿ ನೀಡುತ್ತಾ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ರಾಜ್ಯ ಘಟಕದ ಅಧ್ಯಕ್ಷರಾದ ಮಧು ನಾಯಕ್, ಸವಿತ, ನರಸಿಂಹಮೂರ್ತಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಗಾಯಕರು, ಕಲಾವಿದರು ಉಪಸ್ಥಿತರಿದ್ದರು.
