ತುಮಕೂರು : ಹಾಲಪ್ಪ ಪ್ರತಿಷ್ಠಾನದವತಿಯಿಂದ, ಜಿಲ್ಲಾ ಕಾಂಗ್ರೆಸ್ ಸಹಯೋಗದಲ್ಲಿ ನಗರದ ಕುಣಿಗಲ್ ರಸ್ತೆಯ ಬನಶಂಕರಿ ದೇವಾಲಯದ ಮುಂಭಾಗದಲ್ಲಿ ಎಸ್.ಐ.ಆರ್ ಕುರಿತು ಜಾಗೃತಿ ಹಾಗು ಸಹಾಯ ಕೇಂದ್ರ ತೆರೆದು ಸೇವೆ ಒದಗಿಸಲಾಗುತ್ತಿದೆ, ಎಸ್.ಐ,ಆರ್.ಕುರಿತು ಜಾಗೃತಿ ಹಾಗು ಸೇವಾ ಕಾರ್ಯಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಹಿರಿಯ ಉಪಾಧ್ಯಕ್ಷರು ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಮುರುಳೀಧರಹಾಲಪ್ಪ, ರಾಜ್ಯದಲ್ಲಿ ಎಸ್.ಐ.ಆರ್. ಪ್ರಾರಂಭವಾಗಿ 18 ದಿನಗಳು ಪೂರೈಸಿದ್ದು, ಇದನ್ನು ಸಮರ್ಪಕವಾಗಿ ನಡೆಸಲು ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.ಅಲ್ಲದೆ ಕಾಂಗ್ರೆಸ್ ಪಕ್ಷದತಿಯಿಂದಲು ಸುಮಾರು 65 ಸಾವಿರ ಬಿಎಲ್ಎಗಳನ್ನು ನೇಮಕ ಮಾಡಿ, ಎಸ್.ಐ.ಆರ್.ಪ್ರಕ್ರಿಯೆಯನ್ನು ಸುಗಮಗೊಳಿಸಲು ನೆರವಾಗುತಿದ್ದಾರೆ.ಇದಕ್ಕಾಗಿ ಸರಕಾರ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ತಿಳಿಸುತ್ತೇವೆ.
ಭಾರತ ಪ್ರತಿಯೊಬ್ಬ ಪ್ರಜೆಯೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಸರಕಾರದ ಉದ್ದೇಶವಾಗಿದೆ.ಹಾಗಾಗಿ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ತಮ್ಮ ವಾರ್ಡು, ಕ್ಷೇತ್ರಗಳಲ್ಲಿ ಈ ಕಾರ್ಯವನ್ನು ಮಾಡುತ್ತಿದ್ದು, ಇದರ ಭಾಗವಾಗಿಯೇ ಇಂದು ಬನಶಂಕರಿ ದೇವಾಲಯದ ಬಳಿ ಎಸ್.ಐ.ಆರ್. ಎನ್ಮರೇಷನ್ ಫಾರಂ ತುಂಬಲು ಸ್ವಯಂ ಸೇವಕರನ್ನು ನೇಮಿಸಿ ಅವಿದ್ಯಾವಂತರು, ಫಾರಂ ತುಂಬಲು ಕಷ್ಟವಾದವರ ನೆರವಿಗೆ ಬರಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿರುವುದನ್ನು ನೋಡಿ ವಿರೋಧ ಪಕ್ಷವಾದ ಬಿಜೆಪಿಗೆ ಕಸಿವಿಸಿಯಾಗಿದೆ.ಇಲ್ಲಸಲ್ಲದ ಅಪಪ್ರಚಾರಕ್ಕೆ ಮುಂದಾಗಿದ್ದಾರೆ.ಇದಕ್ಕೆ ಕಾಂಗ್ರೆಸ್ ಪಕ್ಷ ಸಮರ್ಥವಾಗಿಯೇ ಎಸ್.ಐ.ಆರ್. ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಿದೆ.ಇಡೀ ಪ್ರಕ್ರಿಯೆಯ ಪೂರ್ಣ ಜವಾಬ್ದಾರಿ ಬಿಎಲ್ಓ ಗಳದ್ದು ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ,ನಮ್ಮ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದವತಿಯಿಂದ ಹಾಗೂ ಕೆಲ ಮುಖಂಡರು ವೈಯಕ್ತಿಕವಾಗಿ ಎಸ್.ಐ.ಆರ್. ಪ್ರಕ್ರಿಯೆಗೆ ಪೂರಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.ಈಗಾಗಲೇ ಸುಮಾರು ಶೇ70 ರಷ್ಟು ಎನ್ಮರೇಷನ್ ಫಾರಂನ್ನು ಜನರು ವಾಪಸ್ ಮಾಡಿದ್ದಾರೆ. ಅದರಲ್ಲಿ ಸುಮಾರು ಶೇ48ರಷ್ಟು ಇದುವರೆಗೂ ಡಿಜಿಟಲೀಕರಣ ಮಾಡಿದ್ದಾರೆ. ಕೆಲವು ವಾರ್ಡುಗಳಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಚುನಾವಣಾ ಶಾಖೆ ಇದರ ಬಗ್ಗೆ ಗಮನಹರಿಸಬೇಕು.ಚುನಾವಣಾ ಆಯೋಗ ಮೊದಲ ಹಂತದ ಕಾರ್ಯವನ್ನು ಆಗಸ್ಟ್ 08ರವರೆಗೆ ವಿಸ್ತರಿಸಿದೆ.ಹಾಗಾಗಿ ಎಲ್ಲರು ಇದರ ಲಾಭ ಪಡೆದು ಕೊಳ್ಳಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಸಿದ್ದಲಿಂಗೇಗೌಡ, ರೇವಣ್ಣಸಿದ್ದಯ್ಯ ಅವರುಗಳು ಮಾತನಾಡಿದರು.
ವರದಿ : ಕೆ ಬಿ ಚಂದ್ರಚೂಡ್
