Bhagavad Gita
ಶ್ಲೋಕ – 37
ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋSಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ ತತ್ಪರಂ ಯತ್ ॥೩೭॥
ಕಸ್ಮಾತ್ ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣಃ ಅಪಿ ಆದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮ್ ಅಕ್ಷರಮ್ ಸತ್ ಅಸತ್ ತತ್ಪರಮ್ ಯತ್ –ಓ ಮಹಾತ್ಮನೆ, ಅವರೇಕೆ ಪೊಡಮಡದೆ ಇದ್ದಾರು ನಿನಗೆ; ಬ್ರಹ್ಮನಿಗು ಹಿರಿಯನಿಗೆ; ಮೊಟ್ಟ ಮೊದಲ ತಂದೆಗೆ. ಓ ಕೊನೆಯಿರದವನೆ, ಸಗ್ಗಿಗರೊಡೆಯನೆ, ಜಗದ ಆಸರೆಯೆ, ನೀನು ಅಳಿವಿರದವನು. ಕಾಣುವ, ಕಾಣದ ವಿಶ್ವದೊಳಗಿದ್ದು ಅದರಾಚೆಗಿರುವವನು.
ನಿನ್ನನ್ನು ತಿಳಿದವರು ನಿನಗೆ ನಮಸ್ಕಾರ ಮಾಡದೆ ಇರಲು ಸಾಧ್ಯವೇ ಇಲ್ಲ. ನೀನು ಪರಿಪೂರ್ಣವಾದ ಆತ್ಮ. ಈ ಜಗತ್ತಿನ ತಂದೆಯಾದ ಆ ಚತುರ್ಮುಖನಿಗೂ ನೀನು ತಂದೆ. ಇಂಥಹ ನಿನಗೆ ನಮಸ್ಕರಿಸದೆ ಇರಲು ಸಾಧ್ಯವಿಲ್ಲ. ನೀನು ದೇಶ, ಕಾಲ ಮತ್ತು ಗುಣಗಳಿಂದ ಅನಂತ. ನೀನು ಎಲ್ಲರ ಒಳಗೂ ಹೊರಗೂ ತುಂಬಿ ನಿಂತಿರುವ ಜಗನ್ನಿವಾಸ, ನೀನು ನಿರ್ಧಿಷ್ಟ ಹಾಗು ದೋಷ ರಹಿತ ಜ್ಞಾನಾನಂದಮೂರ್ತಿ(ಸತ್), ಅವ್ಯಕ್ತಮೂರ್ತಿಯಾದ ನಿನ್ನನ್ನು (ಅಸತ್) ಹೊರಗಣ್ಣಿನಿಂದ ಕಾಣಲಾರೆವು. ನೀನು ಅಕ್ಷರಃ, ನೀನು ದೇವೇಶಃ, ನೀನು ಕಾರಣಗಳಿಗೂ ಕಾರಣ, ನೀನು ಜಗದ ಆಸರೆ.
