ಬೆಳಗಾವಿ : ಕವಿಗಳು ನಮ್ಮ ಪೂರ್ವಜರ ಕವಿತೆಗಳನ್ನು ಅಧ್ಯಯನ ಮತ್ತು ಅಧ್ಯಾಪನ ಮಾಡಿದಾಗ ಕಾವ್ಯ ಪ್ರಭೇದಗಳು, ಗುಣಲಕ್ಷಣಗಳು, ಓಘ, ಲಯಬದ್ಧತೆ, ಪದಪ್ರಯೋಗ, ಭಾವಾಭಿವ್ಯಕ್ತಿ ಗೋಚರಿಸುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷೆ ಸುಶೀಲಾ ಲ. ಗುರವ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ನಗರದ ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕವಿಗಳು ಪರಂಪರೆಯ ಕಿವಿಯಾಗಬೇಕು, ಕಣ್ಣಾಗಬೇಕು. ಅನುಭವದ ಅಭಿವ್ಯಕ್ತಿ ಕಾವ್ಯವಾಗುತ್ತದೆ. ಕವಿಗಳು ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಧ್ವನಿಯಾಗಬೇಕು. ಕವಿಯಾದವನು ಜಾತ್ಯಾತೀತ, ಧರ್ಮಾತೀತ, ಲಿಂಗಾತೀತ ಸಮತೆಯ ಹೊಳವುಗಳನ್ನು ತನ್ನ ಕಾವ್ಯದಲ್ಲಿ ದಾಖಲಿಸಿದಾಗ ಮಾತ್ರ ಅವನು ಅವನ ಕಾವ್ಯ ಸಾರ್ವತ್ರಿಕವಾಗಲು ಸಾಧ್ಯ. ನಮ್ಮ ವೇದಿಕೆಯ ಕೇಂದ್ರ ಸಮಿತಿಯ ಸಲಹೆಯಂತೆ ನಿರಂತರವಾಗಿ ವೈವಿಧ್ಯಮಯ ಸಾಹಿತ್ಯಿಕ ಚಟವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಯುವ ಪ್ರತಿಭೆಗಳನ್ನು ಗುರುತಿಸುವ, ಹಿರಿಯ ಅನುಭಾವಿಕರ ನುಡಿಗಳನ್ನು ಕೇಳಿಸುತ್ತಾ ಸಾಹಿತ್ಯದ ರಥವನ್ನು ಎಳೆಯುವ ಜವಬ್ದಾರಿ ನಮ್ಮೆಲ್ಲರದಾಗಿದೆ ಎಂದರು.

ಕವಯಿತ್ರಿ ಇಂದಿರಾ ಮೋಟೆಬೆನ್ನೂರು ಆಶಯ ನುಡಿಗಳನ್ನಾಡಿ ನಾವು ಹೆಚ್ಚೆಚ್ಚು ಓದಿದಷ್ಟು, ಕವಿತೆಗಳನ್ನು ಕೇಳಿದಷ್ಟು ನಮ್ಮಲ್ಲಿ ಕವನ ಬರೆಯುವ ಆಸಕ್ತಿ ಹೆಚ್ಚಾಗುತ್ತದೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಈ ದಿಸೆಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಂತಾಮಣರಾವ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಭಾರತಿ ಭೀಮರಾವ್ ದಾಸೋಗ ಮಾತನಾಡಿ ಕವಿಗಳಿಗೆ ದೊಡ್ಡವರ ನರಳಿರಬೇಕು, ಹಿರಿಯರ ಮಾತುಗಳು ನಮಗೆ ಜೀವನದಲ್ಲಿ ಸದಾ ದಾರಿ ದೀಪಗಳಾಗುತ್ತವೆ ಎಂದರು.

ಕವಿಗೋಷ್ಠಿಯಲ್ಲಿ ಅಕ್ಕಮಹಾದೇವಿ ತೆಗ್ಗಿ, ಸುಧಾ ಪಾಟೀಲ, ಹೀರಾ ಚೌಗಲೆ, ಸುನೀತಾ ಸೊಲ್ಲಾಪುರೆ, ಶಾಲಿನಿ ಚಿನಿವಾರ, ಗಂಗಾ ಚಕ್ರಸಾಲಿ, ಮಹಾನಂದಾ, ಸುನೀತಾ ನಂದಣ್ಣವರ್, ಪ್ರಭಾ ಪಾಟೀಲ, ದೀಪಾ ಉಳ್ಳೇಗಡ್ಡಿ ಸೇರಿದಂತೆ ಹಲವು ಕವಿಗಳು ಕವಿತೆ ವಾಚನ ಮಾಡಿದರು.
ಕವಯಿತ್ರಿ ಸುಧಾ ಸಾಬಣ್ಣವರ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು. ಸಾವಿತ್ರಿ ಉಪ್ಪಿನ ಸ್ವಾಗತಿಸಿದರು, ಮಹಾದೇವಿ ಪಾಟೀಲ ಪ್ರಾರ್ಥಿಸಿದರು, ಗಂಗಮ್ಮ ಪಾಟೀಲ ನಿರೂಪಿಸಿದರು, ಗೀತಾ ಜಮಖಂಡಿ ಹಾಗೂ ಗೌರಿ ರಾಮಗುರವಾಡಿ ಕಾರ್ಯಕ್ರಮ ನಿರ್ವಹಿಸಿದರು. ದಾಮೋದರ್ ಬಡಿಗೇರ್ ವಂದಿಸಿದರು.
