ನಾಡಿನ ಶ್ರೇಷ್ಠ ಕಾದಂಬರಿಕಾರರು ಡಾ. ಎಸ್. ಎಲ್. ಭೈರಪ್ಪನವರು, ನಾವು ಬಾಲ್ಯದಲ್ಲಿ ಅವರ ಕಾದಂಬರಿ ಓದಿ ಬೆಳೆದವರು, ಪ್ರಭಾವಿತರಾದವರು. ಅವರು ಇದೇ ಚನ್ನರಾಯಪಟ್ಟಣ ತಾಲ್ಲೂಕಿನವರು. ಅವರು ನಿಧನರಾಗುವ ಮುನ್ನ ನನಗೆ ಸಾರ್ಥ ಕಾದಂಬರಿಯನ್ನು ಕೊಟ್ಟಿದ್ದರು. ಅದನ್ನು ಓದಿ ನಾನು ಪ್ರಭಾವಿತನಾಗಿ ಮಡದಿಯೊಂದಿಗೆ ಕಾಶೀಯಾತ್ರೆ ಮಾಡಿ ಬರುವಾಗ ಮೊಬೈಲ್ ಕಳೆದುಕೊಂಡೆನು ಎ೦ದು ಹಾಸ್ಯ ಸಾಹಿತಿ ಗೊರೂರು ಅನಂತರಾಜು ಭಾವನಾತ್ಮಕವಾಗಿ ನುಡಿದರು.
ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವನ್ನು ಚನ್ನರಾಯಪಟ್ಟಣದ ಪ್ರತಿಮಾ ಟ್ರಸ್ಟ್ ಮಿನಿ ರಂಗ ಮಂದಿರದ ಗ್ರಂಥಾಲಯ ಉದ್ಘಾಟನಾ ಸಮಾರಂಭದ
ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನನ್ನ ಕವಿಮಿತ್ರ ಗದಗದ ಡಿ.ವಿ. ಬಡಿಗೇರ ಅವರು ತಮ್ಮ
ಸoಘಟನೆಯ ಕಬ್ಬಿಗರ ಕೂಟದಿಂದ ಭೈರಪ್ಪನವರ ಜನ್ಮ ದಿನದಂದು ಅವರ ಮನೆಯಲ್ಲೇ ಅವರ ಕಾದಂಬರಿ ಕುರಿತು ಉಪನ್ಯಾಸ ಮತ್ತು ಕವಿಗೋಷ್ಠಿ ಏರ್ಪಡಿಸಲು ಜಿಲ್ಲೆಯ ಕವಿಗಳ ಸಹಕಾರ ಕೋರಿದ್ದಾರೆ. ಗದಗದಿಂದ ತಮ್ಮ ತಂಡ ಬರುವುದಾಗಿ ತಿಳಿಸಿದ್ದಾರೆ.ಕನ್ನಡ ಪುಸ್ತಕ ಪ್ರಾಧಿಕಾರದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮವನ್ನು ಚನ್ನರಾಯಪಟ್ಟಣದ ಈ ರಂಗ ವೇದಿಕೆಯಲ್ಲಿ ಏರ್ಪಡಿಸಬೇಕೆಂದು ಪ್ರಾಧಿಕಾರದ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಕುರಿತು ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಮಾಹಿತಿ ನೀಡಿ.ಮಾತನಾಡಿ ಮನೆಗೊಂದು ಗ್ರಂಥಾಲಯ ಕಾರ್ಯ ಯೋಜನೆಯಲ್ಲಿ ತಾವು ರಾಜ್ಯಾದ್ಯಂತ ಜಿಲ್ಲಾ ಅನುಷ್ಠಾನ ಸಮಿತಿ ಸಹಕಾರದಲ್ಲಿ ಆಯೋಜಿಸುತ್ತಿದ್ದು ಈಗಾಗಲೇ ಒಂದು ಸುತ್ತು ಮುಗಿದಿದ್ದು 2ನೇ ಸುತ್ತಿನಲ್ಲಿ ಹಾಸನ ಜಿಲ್ಲೆಯಲ್ಲಿ ಕಾರ್ಯಕ್ರಮ ಪ್ರಗತಿಯ ಹಾದಿಯಲ್ಲಿ ಸಾಗಿದೆ ಎಂದರು.

ನಾಟಕಕಾರ ಉಮೇಶ್ ತೆಂಕನಹಳ್ಳಿಯವರ ಪ್ರತಿಮಾ ಟ್ರಸ್ಸ್ ಮತ್ತು ಕಲಾವಿದರನ್ನು ಪರಿಚಯಿಸಿ ಮಾತನಾಡಿದ ಶ್ರೀಮತಿ ನೇತ್ರಾವತಿ, ಮುಖ್ಯ ಶಿಕ್ಷಕಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಪೇಟೆ, ಚನ್ನರಾಯಪಟ್ಟಣ ಇವರು ಉಮೇಶ್ ತೆಂಕನಹಳ್ಳಿಯವರ
ಕಪ್ಪು ಹಲ್ಲಿನ ಕಥೆ ಕಾದಂಬರಿಯಲ್ಲಿ ಒಟ್ಟು ಬರುವ ಸನ್ನಿವೇಶ ಮತ್ತು ಅದರ ಮಹತ್ವವನ್ನು ವಿವರಿಸಿದರು. ಜೊತೆಗೆ ಪ್ರತಿಮಾ ಟ್ರಸ್ಟ್ ಸರ್ಕಾರಿ ಶಾಲಾ ಕಾಲೇಜುಗಳಿಗೆ ಉಚಿತ ತರಬೇತಿ ನೀಡುತ್ತಾ ಬರುತ್ತಿದ್ದು, ಈ ಬಾರಿ ವಾರ್ಷಿಕ ಶಿಬಿರಕ್ಕೆ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್.ಎನ್. ಲೋಕೇಶ್ ಮಾತನಾಡಿ ಪ್ರಾಧಿಕಾರ ಸಾಹಿತ್ಯಕ್ಕೆ ಸಂಬಂದಿಸಿದ ಯಾವುದೇ ಚಟುವಟಿಕೆಗಳು ನಮ್ಮ ಜಿಲ್ಲೆಯಲ್ಲಿ ಆಯೋಜನೆ ಮಾಡಿದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಜೊತೆಗೆ ಪ್ರತಿಮಾ ಟ್ರಸ್ಟ್ ಮಾಡುವ ಯಾವುದೇ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಡಾ.ಬರಾಳು ಶಿವರಾಮ, ಡಾ. ಕುಶಾಲ ಬರಗೂರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ IACT ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಸಂಸ್ಥಾಪಕರಾದ ಲೋಕೇಶ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತೆಂಕನಹಳ್ಳಿ ಉಮೇಶ್ ದಂಪತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ ಅಭಿನಂದನಾ ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷರು ನೀಡಿ ಗೌರವಿಸಿದರು.
