ತುಮಕೂರು :ಶ್ರೀಗಂಧ ಮತ್ತು ನೈಸರ್ಗಿಕ ಆಹಾರ ಉತ್ಪನ್ನಗಳ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಸೆಪ್ಟಂಬರ್ 6ರಂದು ಬೆಳಿಗ್ಗೆ 10.15ಕ್ಕೆ ಸಿರಾ ಮುಖ್ಯರಸ್ತೆಯ ನಾಡೋಜ ಬರಗೂರು ರಾಮಚಂದ್ರಪ್ಪ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಬಿ.ಆರ್.ರಘುರಾವ್ ತಿಳಿಸಿದರು.
ಆಹಾರ ತಜ್ಞ ಡಾ.ಖಾದರ್ ಅವರ ನೈಸರ್ಗಿಕ ಆಹಾರ ಪದ್ಧತಿಯ ಬಗ್ಗೆ, ವಿಶೇಷ ಉಪನ್ಯಾಸ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿದ್ದು, ಡಾ.ಖಾದರ್ ಅವರು, ನಿಸರ್ಗದ ಮೇಲಾಗುತ್ತಿರುವ ಪ್ಲಾಸ್ಟಿಕ್ ಹಾವಳಿ ಮತ್ತು ವಿಷಯುಕ್ತ ಆಹಾರದ ಬದಲಿಗೆ ವಿಷಮುಕ್ತ ಅಹಾರವನ್ನು ಜನರಿಗೆ ನೀಡುವ ಮಹತ್ವದ ಉದ್ದೇಶದೊಂದಿಗೆ ಈ ನೆಲೆದ ಆಹಾರ ಪದಾರ್ಥಗಳಾದ ಸಿರಿಧಾನ್ಯದ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು, ಜನರನ್ನು ಕಾಡುತ್ತಿರುವ ಬಿ.ಪಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ಮಾರಕ ಕಾಯಿಲೆಗಳಿಗೆ ಸಿರಿಧಾನ್ಯ ಸೇವನೆಯ ಮೂಲಕ ಹೇಗೆ ರೋಗಮುಕ್ತ ಜೀವನ ನಡೆಸಬಹುದು ಎಂಬುದನ್ನು ಸ್ವತಃ ಕಂಡುಕೊಂಡು, ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ತಿಳಿಸುತ್ತಾ, ವಿಷಮುಕ್ತ, ಗುಣಮಟ್ಟದ ಆಹಾರ ಪದ್ಧತಿ ಹಾಗೂ ಗುಣಮಟ್ಟದ ಜೀವನ ಕ್ರಮದ ಬಗ್ಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.
ಡಾ.ಖಾದರ್ ಅವರ ಮಾರ್ಗದರ್ಶನದಂತೆ ಸಿರಿಧಾನ್ಯಗಳನ್ನು ಬಳಕೆ ಮಾಡಿದ್ದೇ ಆದರೆ, ರೋಗ ಮುಕ್ತ ಜೀವನ ನಡೆಸಬಹುದು ಎಂಬುದಕ್ಕೆ ನಾಡಿನಲ್ಲಿ ಸಾಕಷ್ಟು ಜೀವಂತ ಉದಾಹರಣೆಗಳನ್ನು ಕಾಣಬಹುದು. ಇದರ ಬಗ್ಗೆ ಸಂಪೂರ್ಣ ಮಾರ್ಗದರ್ಶನವನ್ನು ಸೆಪ್ಟೆಂಬರ್ 06 ಭಾನುವಾರ ನೈಸರ್ಗಿಕ ಆಹಾರ ಕ್ರಮದ ಕುರಿತ ವಿಶೇಷ ಉಪನ್ಯಾಸದ ವೇಳೆ ತಿಳಿಸಿಕೊಡಲಿದ್ದಾರೆ ಎಂದು ಡಾ. ಬಿ.ಆರ್.ರಘುರಾವ್ ತಿಳಿಸಿದರು.ಆಹಾರ ತಜ್ಞ ಡಾ.ಖಾದರ್ ಅವರ ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಗಂಧ ಬೆಳೆಗಾರರ, ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಘದ ರಘುರಾವ್, ನೈಸರ್ಗಿಕ ಕೃಷಿಕರಾದ ಮಹೇಶ್ ಅಮ್ಮನಘಟ್ಟ, ತುಂತುರು ನೀರಾವರಿ ತಜ್ಞರು, ವೈವಿಧ್ಯ ಬೆಳೆಗಾರರಾದ ಚೇಳೂರು ವೆಂಕಟೇಶ್, ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ,ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ತುಮಕೂರು -2, ಕರ್ನಾಟಕ ಸರ್ವೋದಯ ಮಂಡಳಿ, ಕರ್ನಾಟಕ ರಾಜ್ಯ ರೈತ ಸಂಘ, ಎಸ್.ಬಿ.ಐ.ಬ್ಯಾಂಕ್,ಶಿರಾ., ಕೆನರಾ ಬ್ಯಾಂಕ್ ಶಿರಾ, ಮತ್ತು ಎಂ.ಚಿದಾನಂದಗೌಡ ಇವರು ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು, ರೈತರು, ಇದರ ಸದುಪಯೋಗ ಪಡೆಯಲು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ವಿ.ಪುಟ್ಟಕಾಮಣ್ಣ, ಕಾಂತರಾಜು ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
