ಕೊರಟಗೆರೆ:- ಹಿಂದೂ ಎನ್ನುವುದು ಕೇವಲ ಒಂದು ಧರ್ಮವಲ್ಲ; ಅದು ಜೀವನದ ಒಂದು ದರ್ಶನ, ಬದುಕುವ ಸಂಸ್ಕೃತಿ. ಮಾನವೀಯತೆ, ಸಹಜತೆ, ಸಹಬಾಳ್ವೆ, ಧರ್ಮಪಾಲನೆ ಈ ಎಲ್ಲವೂ ಹಿಂದೂ ಜೀವನ ಪದ್ಧತಿಯ ಮೂಲಭೂತ ಮೌಲ್ಯಗಳು. ನಾವು ಉತ್ತಮವಾಗಿ ಬದುಕುವುದೇ ಹಿಂದೂ ಧರ್ಮದ ಸಾರ್ಥಕತೆ,” ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವದ ಭವ್ಯ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,“ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮವೇ ನಮ್ಮನ್ನು ರಕ್ಷಿಸುತ್ತದೆ ಎಂಬ ಸನಾತನ ಸತ್ಯವನ್ನು ಹಿಂದೂ ಧರ್ಮ ಸಾರುತ್ತದೆ. ಇಂದಿನ ಕಾಲಘಟ್ಟದಲ್ಲಿ ಹಿಂದೂ ಸಮಾಜವು ಒಗ್ಗಟ್ಟಾಗಿ ನಿಲ್ಲುವ ಅಗತ್ಯ ಬಹಳವಾಗಿದೆ. ಜಾತಿ–ಪಂಥಗಳ ಭೇದ ಮರೆತು, ಹಿಂದುಗಳೆಲ್ಲರೂ ಒಂದೇ ಕುಟುಂಬ ಎಂಬ ಭಾವನೆಯೊಂದಿಗೆ ಧರ್ಮರಕ್ಷಣೆಗಾಗಿ ಪಣತೊಟ್ಟು ನಿಲ್ಲಬೇಕು. ಧರ್ಮರಕ್ಷಣೆ ನಮ್ಮ ಉಸಿರಾಗಬೇಕು, ನಮ್ಮ ದೇಹದ ಭಾಗವಾಗಬೇಕು, ಎಂದು ಭಾವಪೂರ್ಣವಾಗಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ತುಮಕೂರು ಹಿರಿಯ ಪ್ರಾಧ್ಯಾಪಕ ಕೊಟ್ರೇಶ್ ಹಿಂದೂ ಧರ್ಮವು ಸಾವಿರಾರು ವರ್ಷಗಳಿಂದ ಮಾನವ ಬದುಕಿಗೆ ದಿಕ್ಕು ತೋರಿದ ಮಹಾಸಂಸ್ಕೃತಿ. ಸಹಿಷ್ಣುತೆ, ಸಮನ್ವಯ, ಸರ್ವಧರ್ಮ ಸಮಭಾವನೆ – ಇವು ಹಿಂದೂ ಧರ್ಮದ ಆತ್ಮ. ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆ, ಧರ್ಮದ ತತ್ತ್ವಗಳನ್ನು ಅರಿತು ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜ ಸದೃಢವಾಗುತ್ತದೆ ಎಂದು ಹೇಳಿದರು.
32 ಕೋಟಿ ದೇವರುಗಳನ್ನು ಪೂಜಿಸುತ್ತಾರೆ ಇಲ್ಲಿ ಯಾವುದೇ ನಿರ್ಬಂಧ ಇಲ್ಲ, ಇದು ಹಿಂದೂ ಧರ್ಮಕ್ಕೆ ಇರುವ ಶಕ್ತಿ, ಸತ್ಯ ಹೇಳುವವನು ಹಿಂದುಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಸಮಾಜೋತ್ಸವದ ಅಧ್ಯಕ್ಷ ಡಾ. ಆರ್ ಮಲ್ಲಿಕಾರ್ಜುನ್, ಆರ್ ಎಸ್ ಎಸ್ ಸಂಘದ ತಾಲೂಕು ಸಂಚಾಲಕ ಉಮೇಶ್,ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್, ಮಾಜಿ ಅಧ್ಯಕ್ಷರಾದ ಎಸ್. ಪವನ್ ಕುಮಾರ್,ದರ್ಶನ್, ಕನ್ನಿಕಾ ವಿದ್ಯಾಪೀಠದ ಅಧ್ಯಕ್ಷ ಎಸ್. ಸುಧೀರ್,ವಾಸವಿ ಮಾತೃ ಮಂಡಳಿಯ ಅಧ್ಯಕ್ಷೆ ಸುಧಾಮಣಿ, ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿಯ ಕಾರ್ಯದರ್ಶಿ ಜಗದೀಶ್, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಜಿಲ್ಲಾ ಅಧ್ಯಕ್ಷ ಮಮತಾ ದಿವಾಕರ್,ಪಟ್ಟಣ ಪಂಚಾಯತ್ ಸದಸ್ಯ ಪ್ರದೀಪ್ ಕುಮಾರ್, ಮುಖಂಡರಾದ ಎಂ.ಜಿ ಭದ್ರಿ ಪ್ರಸಾದ್, ಕೃಷ್ಣಮೂರ್ತಿ, ನಂಜುಂಡ ಶೆಟ್ಟಿ, ಸಿ.ಎಸ್. ಹನುಮಂತರಾಜು, ವಿಜಯಕುಮಾರ್, ರವಿಕುಮಾರ್, ಚೆನ್ನನಂಜಯ್ಯ, ವಿ. ಮಲ್ಲೇಶಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಹಿಂದೂ ಸಮಾಜೋತ್ಸವಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಧ್ವಜಗಳು, ಘೋಷಣೆಗಳು, ಭಕ್ತಿಗೀತೆಗಳೊಂದಿಗೆ ನಡೆದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ್ದು, ಹಿಂದೂ ಸಮಾಜದ ಒಗ್ಗಟ್ಟು, ಸಂಸ್ಕೃತಿ ಹಾಗೂ ಆತ್ಮಗೌರವವನ್ನು ಪ್ರತಿಬಿಂಬಿಸುವ ದೃಶ್ಯವಾಗಿ ಕಾಣಿಸಿತು. ಕಾರ್ಯಕ್ರಮವು ಸಮಾಜದಲ್ಲಿ ಧರ್ಮಬುದ್ಧಿ, ಸಾಂಸ್ಕೃತಿಕ ಅರಿವು ಹಾಗೂ ಏಕತೆಯ ಸಂದೇಶವನ್ನು ಸಾರುವ ಮಹತ್ವದ ವೇದಿಕೆಯಾಗಿ ಮೂಡಿಬಂದಿತು.
ವರದಿ : ಶ್ರೀನಿವಾಸ್ ಕೊರಟಗೆರೆ
