ಶ್ಲೋಕ – 36
ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।
ಜಯೋSಸ್ಮಿ ವ್ಯವಸಾಯೋSಸ್ಮಿ ಸತ್ತ್ವಂ ಸತ್ತ್ವವತಾಮಹಮ್ ॥೩೬॥
ದ್ಯೂತಮ್ ಛಲಯತಾಮ್ ಅಸ್ಮಿ ತೇಜಃ ತೇಜಸ್ವಿನಾಮ್ ಅಹಮ್ ।
ಜಯಃ ಅಸ್ಮಿ ವ್ಯವಸಾಯಃ ಅಸ್ಮಿ ಸತ್ತ್ವಮ್ ಸತ್ತ್ವವತಾಮ್ ಅಹಮ್—ಮೋಸಗಾರರ ಜೂಜು ನಾನು. [ಕ್ರೀಡಾರೂಪನಾಗಿ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದೇನೆ.] ವೀರರಾದವರ ಬೀರ ನಾನು. [ಪ್ರಕಾಶರೂಪನಾದ್ದರಿಂದ ‘ತೇಜಸ್’ ಎನ್ನಿಸಿ ಬೀರದಲ್ಲಿದ್ದೇನೆ.] ಗೆಲುವು ನಾನು. [ಎಲ್ಲವನ್ನು ಗೆದ್ದವನಾಗಿ ‘ಜಯ’ ಎನ್ನಿಸಿ ಗೆಲುವಿನಲ್ಲಿದ್ದೇನೆ.] ದುಡಿಮೆ ನಾನು. [ನಿಶ್ಚಯ ಜ್ಞಾನರೂಪನಾದ್ದರಿಂದ ‘ವ್ಯವಸಾಯ’ ಎನ್ನಿಸಿ ದುಡಿಮೆಯಲ್ಲಿದ್ದೇನೆ.] ಹಿರಿಯ ವ್ಯಕ್ತಿಗಳ ಘನತೆ ನಾನು.[ಸದ್ಗುಣಗಳ ಗಣಿಯಾಗಿ ‘ಸತ್ವ’ ಎನ್ನಿಸಿ ದೊಡ್ಡವರ ಘನತೆಯಲ್ಲಿದ್ದೇನೆ.]
ಕೌರವ ಪಾಂಡವರ ನಡುವೆ ಯುದ್ಧವಾಗಲು ಕಾರಣವಾಗಿ ಕಾಣುವುದು ದ್ಯೂತ. ಇದು ಮೊಸಗಾರಿಕೆಯಲ್ಲಿ ಅತ್ಯಂತ ಶ್ರೇಷ್ಠ ಕಲೆ! ಭಗವಂತ ‘ದ್ಯೂತ’ ಎನ್ನಿಸಿ ಜೂಜಿನಲ್ಲಿದ್ದಾನೆ. ಇಲ್ಲಿ ಭಗವಂತನ ನಾಮ ‘ದ್ಯೂತ’. ದಿವು ಅಂದರೆ ಕ್ರೀಡೆ. ಸದಾ ಸೃಷ್ಟಿ ಸ್ಥಿತಿ ಸಂಹಾರಗಳ ಕ್ರೀಡೆಯಲ್ಲಿ ನಿರತನಾದ ಭಗವಂತ ‘ದ್ಯೂತ’ ಶಬ್ದ ವಾಚ್ಯ. ಆತ್ಮಬಲವುಳ್ಳವರ ತೇಜಸ್ಸು ಭಗವಂತ. ಜಯಃ ನಾಮಕನಾಗಿ ಗೆಲುವಿನಲ್ಲಿ ಭಗವಂತನಿದ್ದಾನೆ. ಜಗತ್ತಿನ ಎಲ್ಲ ವಿಜಯಗಳ ಪ್ರೇರಕ ಭಗವಂತ. ಒಂದು ಕಾರ್ಯದಲ್ಲಿ ಉತ್ಸಾಹದಿಂದ ತೊಡಗುವಂತೆ ಮಾಡುವವನು ‘ವ್ಯವಸಾಯ’ ನಾಮಕ ಭಗವಂತ. ಬಲನಿಯಾಮಕನಾಗಿ ಆತ ಬಲಶಾಲಿಗಳಲ್ಲಿ ‘ಸತ್ವ’ ನಾಮಕನಾಗಿ ಕೂತಿದ್ದಾನೆ.
