ನವದೆಹಲಿ: ಪೆಟ್ರೋಲ್, ಡೀಸೆಲ್ ಖರೀದಿಗೆ ಯಾವುದೇ ಮಿತಿಯಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ (ಇಂದು) ಪುನರುಚ್ಚರಿಸಿದೆ. ಅಲ್ಲದೇ ಅಕ್ರಮ ವಿತರಣೆ ಮತ್ತು ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿವೆ.
ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್ಗಳು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಮಿತಿ ಹೇರಿವೆ ವದಂತಿಗಳು ಹಾಗೂ ತೈಲ ಪೂರೈಕೆಯಲ್ಲಿನ ಅಡಚಣೆ ವರದಿಗಳ ಕುರಿತು ಇಂಡಿಯನ್ ಆಯಿಲ್ ಪ್ರಕಟಣೆ ಹೊರಡಿಸಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ತೈಲ ಖರೀದಿಗೆ ಮಿತಿ ಇಲ್ಲ ಎಂದು ಪುನರುಚ್ಛರಿಸಿದೆ.
ಜಂಟಿ-ಸಚಿವಾಲಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಅವಶ್ಯಕತೆಗಳನ್ನು ಪೂರೈಸಲು ನಮ್ಮಲ್ಲಿ ಸಾಕಷ್ಟು ದಾಸ್ತಾನುಗಳಿವೆ. ಜಾಗತಿಕ, ಭೌಗೋಳಿಕ, ರಾಜಕೀಯ ಉದ್ವಿಗ್ನತೆ ಆಮದುಗಳ ಮೇಲೆ ಪರಿಣಾಮ ಬೀರುತ್ತಿದ್ದರೂ, ಭಾರತವು ಪೆಟ್ರೋಲ್, ಡೀಸೆಲ್, ಎಲ್ಪಿಜಿ ಮತ್ತು ನೈಸರ್ಗಿಕ ಅನಿಲದ ಸಾಕಷ್ಟು ದಾಸ್ತಾನನ್ನು ಹೊಂದಿದೆ. ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಸರ್ಕಾರ ಅಗತ್ಯ ಕ್ರಮಗಳನ್ನ ತೆಗೆದುಕೊಂಡಿದೆ. ದೇಶಾದ್ಯಂತ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಎಲ್ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂಧನ ಅಕ್ರಮಗಳ ತಡೆಗೆ ಕ್ರಮ
ಮುಂದುವರಿದು ಮಾತನಾಡಿ, ಬಿಕ್ಕಟ್ಟಿನ ನಡುವೆಯೂ ದೇಶಾದ್ಯಂತ ಸುಮಾರು 1.34 ಕೋಟಿ ಎಲ್ಪಿಜಿ ಸಿಲಿಂಡರ್ಗಳನ್ನ ವಿತರಣೆ ಮಾಡಲಾಗಿದೆ. ವಾಣಿಜ್ಯ ಎಲ್ಪಿಜಿ ಮಾರಾಟವು 23,588 ಟನ್ಗಳನ್ನು ತಲುಪಿದೆ. ನೈಸರ್ಗಿಕ ಅನಿಲ ವಿಷಯದಲ್ಲಿ 7.99 ಲಕ್ಷ ಹೊಸ ಗ್ರಾಹಕರನ್ನು ನೋಂದಾಯಿಸಲಾಗಿದೆ. ಜೊತೆಗೆ ದೇಶಾದ್ಯಂತ ಇಂಧನ ವಿತರಣೆ ಮೇಲ್ವಿಚಾರಣೆ ಮಾಡಲು ಮತ್ತು ಅಕ್ರಮಗಳನ್ನ ತಡೆಯಲು ಅಗತು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು.
ದೇಶದ ವಿವಿಧೆಡೆ ಈವರೆಗೆ 500 ಕಡೆ ದಾಳಿ ನಡೆಸಲಾಗಿದೆ, 111 ಮಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ, 35 ವಿತರಕರಿಗೆ ನೋಟಿಸ್ ನೋಡಲಾಗಿದೆ, ಒಬ್ಬ ವಿತರಕನನ್ನ ಸಸ್ಪೆಂಡ್ ಮಾಡಲಾಗಿದೆ ಎಂದು ಸುಜಾತಾ ಶರ್ಮಾ ವಿವರಿಸಿದರು.
ಇಂಧನ ಖರೀದಿಗೆ ಮಿತಿಯಿಲ್ಲ
ಇನ್ನೂ ದೇಶಾದ್ಯಂತ ಇಂಧನ ಸರಬರಾಜು ಸ್ಥಿರವಾಗಿದ್ದು, ಖರೀದಿಗೆ ಯಾವುದೇ ಮಿತಿಯಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಹೇಳಿದೆ.
ಗ್ರಾಹಕರು ಆತಂಕಕ್ಕೆ ಒಳಗಾಗುವುದು ಬೇಡ, ವದಂತಿಗಳು ಮತ್ತು ತಪ್ಪು ಮಾಹಿತಿಗಳಿಗೆ ಕಿವಿಗೊಡಬಾರದು. ದೇಶಾದ್ಯಂತ ವಿಶ್ವಾಸಾರ್ಹ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಇಂಡಿಯನ್ ಆಯಿಲ್ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
