ಶ್ಲೋಕ – 05
ಕ್ಲೇಶೋSಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ ।
ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ॥೫॥
ಕ್ಲೇಶಃ ಅಧಿಕ ತರಃ ತೇಷಾಮ್ ಅವ್ಯಕ್ತ ಆಸಕ್ತ ಚೇತಸಾಮ್ ।
ಅವ್ಯಕ್ತಾ ಹಿ ಗತಿಃ ದುಃಖಮ್ ದೇಹವದ್ಭಿಃ ಅವಾಪ್ಯತೇ –-ಅವ್ಯಕ್ತತತ್ವದ ಉಪಾಸನೆಯನ್ನೇ ಮೆಚ್ಚುವವರಿಗೆ ದಣಿವು ಹೆಚ್ಚು. ಅವ್ಯಕ್ತದ ಮೂಲಕ ಬಿಡುಗಡೆಯ ದಾರಿ ಸಾಧಕರಿಗೆ ಕಷ್ಟದ ಬಳಸುದಾರಿ.
ಶಕ್ತಿ ಉಪಾಸನೆ ಮಾಡುವವರಿಗೆ ಆಕೆ ಒಲಿದು ಮೋಕ್ಷ ಕರುಣಿಸುತ್ತಾಳೆ, ಆದರೆ ಅವ್ಯಕ್ತದ ಉಪಾಸನೆ ಮಾಡುವವರಿಗೆ ‘ಅಧಿಕ ತರ ಕ್ಲೇಶಃ’ –ಉಪಾಸನೆ ತುಂಬಾ ಕಷ್ಟ. ಇದು ನೇರ ದಾರಿಯನ್ನು ಬಿಟ್ಟು ಬಳಸುದಾರಿಯಲ್ಲಿ ಭಗವಂತನೆಡೆಗೆ ಪಯಣಿಸಿದಂತೆ. ಸಾಧಕರು ಇದನ್ನು ಬಹಳ ಕಷ್ಟದಿಂದ ಸಾಧಿಸಬೇಕು.
ಮುಂದಿನ ಶ್ಲೋಕಗಳಲ್ಲಿ ಕೃಷ್ಣ ನೇರ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದನ್ನು ವಿವರಿಸುತ್ತಾನೆ. ಇದು ಭಗವಂತ ನಮಗೆ ತೋರಿಸಿಕೊಟ್ಟ ಸುಲಭ ಭಕ್ತಿ ಮಾರ್ಗ.
