ಭಾರತ ದೇಶದಲ್ಲಿ ಸ್ವಾತಂತ್ರ್ಯ,ಸಮಾನತೆ, ಸಹೋದರತ್ವದ ತಳಹದಿಯ ಮೇಲೆ ಭಾರತ ಸಂವಿಧಾನವನ್ನು ರಚಿಸಿ ಭಾರತದಲ್ಲಿ ವಾಸಿಸುವ ಕಟ್ಟ ಕಡೆಯ ವ್ಯಕ್ತಿಯು ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ ಸಂವಿಧಾನ ಶಿಲ್ಪಿ ಸಮಾನತೆ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಚನ್ನರಾಯಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಕಚೇರಿ (ಮಿನಿವಿಧಾನಸೌಧ) ಆವರಣದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಜನಮಾನಸದೊಂದಿಗೆ ಭವ್ಯ ಮೆರವಣಿಗೆ ಮೂಲಕ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣರವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ 12 ಪ್ರತಿಮೆಯನ್ನು ಮಾಡಿಸಿ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ತಂದು ನಿಲ್ಲಿಸಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಟಾರ್ಪಲ್ ಗಳ ಮೂಲಕ ಸುತ್ತಿ ನಿಲ್ಲಿಸಲಾಯಿತು. ಆದರೆ ಪ್ರತಿಮೆಯನ್ನು ತಂದು ನಿಲ್ಲಿಸಿ 10 ತಿಂಗಳು ಕಳೆದರೂ
ಅದನ್ನು ಸಾರ್ವಜನಿಕ ದರ್ಶನಕ್ಕೆ ಅನಾವರಣ ಗೊಳಿಸಿ ಅವಕಾಶ ಕಲ್ಪಿಸದಿರುವುದು ನಿಜಕ್ಕೂ ಅಸಡ್ಡೆತನದ ವಿಚಾರವಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ದಲಿತ ಪರ ಸಂಘಟನೆಗಳ ಹೋರಾಟಗಾರರ ಒತ್ತಾಯ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಸರ್ವ ಜನಾಂಗದ ಮಹದಾಸೆಯು ಸಂವಿಧಾನದ ನಿರ್ಮಾತೃ ಡಾ ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಕಚೇರಿ ಆವರಣದಲ್ಲಿ ಅದ್ದೂರಿಯಾಗಿ ಸಮಾರಂಭವನ್ನು ಸಂಘಟಿಸಿ ಅನಾವರಣಗೊಳಿಸುವ ಮೂಲಕ ಮಹಾ ನಾಯಕನ ಪ್ರತಿಭೆಯನ್ನು ಸಮಾನತೆಯ ದ್ಯೋತಕವಾಗಿ ಸಾರ್ವಜನಿಕರಿಗೆ ತೆರೆದಿಡಬೇಕು ಎಂಬುದಾಗಿತ್ತು. ಪ್ರಾರಂಭದಲ್ಲಿ ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರಾದ ಸಿ ಎನ್ ಬಾಲಕೃಷ್ಣ ರವರು ಪ್ರತಿಮೆಯನ್ನು ಮಾಡಿಸಲು ತೋರಿದಷ್ಟು ಆಸಕ್ತಿಯನ್ನು ಪ್ರತಿಮೆ ಯನ್ನು ಅನಾವರಣಗೊಳಿಸಲು ತೋರಿಸದಿರುವುದು ನಿಜಕ್ಕೂ ಆಶ್ಚರ್ಯಕರ ಹಾಗೂ ದುಃಖಕರ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಾರಂಭದಲ್ಲಿ ಬಾಬಾ ಸಾಹೇಬ್ ಪ್ರತಿಮೆಯನ್ನು ಸ್ಥಾಪನೆಗೊಳ್ಳಬೇಕು ಎಂದು ಹೋರಾಡಿದ ವಿವಿಧ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ನಾಯಕರುಗಳು ಒಂದೊಂದು ರಾಜಕೀಯ ಪಕ್ಷದ ಓಲೈಕೆಗೆ ಒಳಗಾಗಿ ಚಮಚ ರಾಜಕಾರಣದ ರುಚಿ ಹತ್ತಿಸಿಕೊಂಡಿರುವ ಪರಿಣಾಮ ಹಾಗೂ ಅವರ ನೆಚ್ಚಿನ ರಾಜಕೀಯ ಪಕ್ಷದ ನಾಯಕರನ್ನೇ ಈ ಪ್ರತಿಮೆಯ ಉದ್ಘಾಟನೆಗೆ ಕರೆಯಲೇಬೇಕೆಂಬ ಹಠ ಮತ್ತು ಉಂಬುತನಕ್ಕೆ ಬಿದ್ದಿರುವ ಪರಿಣಾಮ ಈ ದೇಶಕ್ಕೆ ಸಂವಿಧಾನವನ್ನು ರಚಿಸುವ ಮೂಲಕ ಶೋಷಿತರನ್ನು ಮತ್ತು ಅವಕಾಶ ವಂಚಿತರನ್ನು ಜಾತಿಯ ಸಂಕೋಲೆಗಳಿಂದ ಬಿಡುಗಡೆಗೊಳಿಸಿದಂತಹ ವಿಶ್ವ ಜ್ಞಾನಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಗ್ರಹಣ ಹಿಡಿದಂತೆ ಮಾಡಿ ಅನಾವರಣಗೊಳಿಸದೆ ಪ್ರಕೃತಿ ದತ್ತವಾಗಿ ಗಾಳಿ ಮಳೆ ಬಿಸಿಲಿಗೆ ಪ್ರತಿಮೆಗೆ ಹೊಚ್ಚಿದ್ದ ಟಾರ್ಪಲ್ ಗಳು ಕಿತ್ತು ಹೋಗಿ ತಾನೇ ತಾನಾಗಿ ಅನಾವರಣಗೊಳ್ಳುವಂತೆ ಮಾಡುತ್ತಿರುವುದು ಈ ತಾಲೂಕಿನ ಪ್ರಗತಿಪರ, ರೈತಪರ, ದಲಿತ ಸಂಘಟನೆಗಳ ಮುಖಂಡರುಗಳು ತಲೆತಗ್ಗಿಸಬೇಕಾದ ಘಟನೆಯಲ್ಲವೇ? ಯಾವುದೇ ಹೋರಾಟ ಮಾಡುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಹಿಡಿದು ಪ್ರತಿಭಟನೆ ಮಾಡುವ ಈ ಸಂಘಟನೆಗಳ ಮುಖಂಡರುಗಳು ಅಂಬೇಡ್ಕರ್ ಅವರ ಪ್ರತಿಮೆಯ ಅನಾವರಣಕ್ಕೆ ಹಕ್ಕುತ್ತಾಯ ಮಾಡದಿರುವುದು ಚಳುವಳಿಗಳು ಎತ್ತಸಾಗಿವೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಎಲ್ಲಾ ರಾಜಕೀಯ ಪಕ್ಷದ ರಾಜಕಾರಣಿಗಳು ಮುಂದಿನ ಚುನಾವಣೆ ಬಗ್ಗೆ ಚಿಂತಿಸಿದರೆ, ರಾಷ್ಟ್ರೀಯವಾದಿ ವ್ಯಕ್ತಿ ಮುಂದಿನ ಪೀಳಿಗೆ ಮತ್ತು ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಾನಂತೆ ಎಂಬ ಮಾತಿದೆ ಅದರಂತೆ ಈ ದೇಶದ ಭವಿಷ್ಯದ ಬಗ್ಗೆ ಚಿಂತಿಸಿ ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಭೋದಿಸತ್ವ ಅಂಬೇಡ್ಕರ್ ಅವರಂತಹ ರಾಷ್ಟ್ರ ಪ್ರೇಮಿಯ ಪ್ರತಿಮೆಯನ್ನು ಅನಾವರಣಗೊಳಿಸಲು ರಾಜಕಾರಣ ಮೇಳವಾಗಿ ಮಾರ್ಪಾಡಾಗುತ್ತಿರುವುದು ನಿಜಕ್ಕೂ ಶೋಚನೀಯ ವಿಚಾರವಾಗಿದೆ.
*ವರದಿ: ಐ ಕೆ ಮಂಜುನಾಥ್ ಪತ್ರಕರ್ತರು, ಚನ್ನರಾಯಪಟ್ಟಣ.*
