ಶ್ಲೋಕ – 08
ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ।
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ ॥೮॥
ಮಯಿ ಏವ ಮನಃ ಆಧತ್ಸ್ವ ಮಯಿ ಬುದ್ಧಿಮ್ ನಿವೇಶಯ।
ನಿವಸಿಷ್ಯಸಿ ಮಯಿ ಏವ ಅತಃ ಊರ್ಧ್ವಮ್ ನ ಸಂಶಯಃ –ನನ್ನಲ್ಲೆ ಬಗೆಯಿಡು. ನನ್ನಲ್ಲಿ ತಿಳಿವನ್ನು ನಿಲಿಸು. ಅದರ ಫಲವಾಗಿ ಮುಂದೆ ನನ್ನಲ್ಲೆ ನೆಲೆಸುವೆ ಇದಕೆ ಸಂಶಯವಿಲ್ಲ.
ಕೃಷ್ಣ ಹೇಳುತ್ತಾನೆ: ಮನಸ್ಸನ್ನು ನನ್ನಲ್ಲಿ ಆಧಾನ ಮಾಡು ಎಂದು. ‘ಆಧಾನ’ ಎಂದರೆ ಬೀಜ ಬಿತ್ತುವುದು ಅಥವಾ ಕಿಡಿ ಹಚ್ಚುವುದು. ಮನಸ್ಸಿಗೆ ಭಗವಂತನ ಭಕ್ತಿಯ ಕಿಡಿಯನ್ನು ಹಚ್ಚಿ ಅದು ಪ್ರಜ್ವಲಿಸುವಂತೆ ಮಾಡಬೇಕು. ಭಕ್ತಿಯ ಬೀಜ ಬೆಳೆಯುವಂತೆ ಪೋಷಿಸಬೇಕು. ನಿಶ್ಚಯಜ್ಞಾನ ಬುದ್ಧಿಯಲ್ಲಿ ಗಟ್ಟಿಗೊಳ್ಳಬೇಕು. ಈ ರೀತಿ ಸದಾ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದಾಗ, ಯಾವುದೇ ಕ್ಲೇಶವಿಲ್ಲದೆ ಭಗವಂತನನ್ನು ಸೇರಬಹುದು. ಇದು ಶಕ್ತಿ ಉಪಾಸನೆಗಿಂತ ಭಗವಂತನ ಉಪಾಸನೆ ಎಷ್ಟು ಸುಲಭ ಎನ್ನುವುದರ ವಿವರಣೆ. ಭಗವಂತನ ಉಪಾಸನೆಗೆ ಕಟ್ಟುಪಾಡು ನಿರ್ಬಂಧ ಬಹಳ ಕಡಿಮೆ. ಉದಾಹರಣೆಗೆ ವಿಷ್ಣುಸಹಸ್ರನಾಮ ಪಾರಾಯಣ. ವಿಷ್ಣುಸಹಸ್ರನಾಮ ಚಿಂತನೆಗೆ ಯಾವುದೇ ನಿರ್ದಿಷ್ಟ ಸಮಯದ ನಿರ್ಬಂಧವಿಲ್ಲ. ಯಾರು ಬೇಕಾದರೂ ಯಾವ ಕಾಲದಲ್ಲಿ ಕೂಡ ವಿಷ್ಣುಸಹಸ್ರನಾಮ ಪಠಿಸಬಹುದು. ಸರ್ವ ರೋಗಕ್ಕೆ ಮದ್ದು ವಿಷ್ಣುಸಹಸ್ರನಾಮ. ಭಗವಂತನ ಚಿಂತನೆಯಲ್ಲಿ ತಿಳಿಯದೆ ಆಗುವ ಲೋಪದೋಷಗಳಿಗೆ ಕ್ಷಮೆಯಿದೆ. ನಾರಾಯಣನ ಉಪಾಸನೆ ಎಂದರೆ ಅದು ಲಕ್ಷ್ಮಿಸಮೇತ ನಾರಾಯಣನ ಉಪಾಸನೆ. ನಾರಾಯಣ ಉಪಾಸನೆ ಮಾಡುವವರು ಲಕ್ಷ್ಮಿಯನ್ನು, ಇತರ ದೇವತೆಗಳನ್ನು ಪ್ರತ್ಯೇಕ ಉಪಾಸನೆ ಮಾಡುವ ಅಗತ್ಯವಿಲ್ಲ. ಲಕ್ಷ್ಮಿಗೆ, ಸರ್ವ ದೇವತೆಗಳಿಗೆ ಅತ್ಯಂತ ಪ್ರೀತಿಪೂರ್ವಕವಾದದ್ದು ಭಗವಂತನ ಉಪಾಸನೆ . ನಾರಾಯಣನ ಉಪಾಸನೆ ಮಾಡುವ ಸಾಧಕನಿಗೆ ಸಕಲ ದೇವತೆಗಳು ಸಹಾಯಮಾಡಿ, ಆತ ತನ್ನ ಸಾಧನಾ ಮಾರ್ಗದಲ್ಲಿ ಎತ್ತರಕ್ಕೇರುವಂತೆ ಮಾಡುತ್ತಾರೆ. ಇದನ್ನು ತಿಳಿದಾಗ ನಮ್ಮ ಉಪಾಸನೆಯಲ್ಲಿ ನಾವು ಸುಲಭವಾಗಿ ಏಕಭಕ್ತಿಯನ್ನು ಸಾಧಿಸಬಹುದು. ಭಕ್ತಿ ಮಾರ್ಗದಲ್ಲಿ ಗಟ್ಟಿಗೊಳ್ಳಬಹುದು.
