ಕೊರಟಗೆರೆ:– ಸ್ವಚ್ಛ ಭಾರತ, ಅಭಿವೃದ್ಧಿ ಮತ್ತು ಡಿಜಿಟಲ್ ಗ್ರಾಮಗಳ ಘೋಷಣೆಗಳು ಒಂದೆಡೆಯಾದರೆ, ಗ್ರಾಮೀಣ ಪ್ರದೇಶಗಳ ನೈಜ ಸ್ಥಿತಿ ಮತ್ತೊಂದೆಡೆಯಾಗಿದೆ. ಗ್ರಾಮದ ರಸ್ತೆ ಹಾಗೂ ವಸತಿ ಪ್ರದೇಶಗಳ ಪಕ್ಕದಲ್ಲಿರುವ ತೆರೆದ ಚರಂಡಿಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದು, ಇಡೀ ಗ್ರಾಮ ದುರ್ವಾಸನೆಯಿಂದ ಬಳಲುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ದಿನನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮಕ್ಕೆ ಕಾಲಿಟ್ಟ ತಕ್ಷಣವೇ ಮೂಗು ಮುಚ್ಚಿಕೊಳ್ಳುವಂತಹ ದುರ್ವಾಸನೆ ಎದುರಾಗುತ್ತದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ತಿಂಗಳುಗಟ್ಟಲೆ ನಿಂತು ಕೊಳೆಯುತ್ತಿದ್ದು, ಪ್ಲಾಸ್ಟಿಕ್ ಬಾಟಲಿಗಳು, ಹೂಳು ಹಾಗೂ ಇತರ ತ್ಯಾಜ್ಯ ವಸ್ತುಗಳು ತುಂಬಿಕೊಂಡಿವೆ. ಹಲವೆಡೆ ಗರಿಕೆ ಹುಲ್ಲು ಹಾಗೂ ಗಿಡಗಳು ಬೆಳೆದಿರುವುದರಿಂದ ಮಳೆ ಬಂದಾಗ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಹಗಲು-ರಾತ್ರಿ ಎನ್ನದೆ ಹರಡುತ್ತಿರುವ ದುರ್ವಾಸನೆಯಿಂದ ಗ್ರಾಮಸ್ಥರು ಮನೆಗಳ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

*ಸೊಳ್ಳೆಗಳ ಕಾಟ, ಸಾಂಕ್ರಾಮಿಕ ರೋಗಗಳ ಭೀತಿ*
ಕೊಳೆಯುತ್ತಿರುವ ಚರಂಡಿ ನೀರು ಸೊಳ್ಳೆ ಹಾಗೂ ಕೀಟಗಳ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಡೆಂಗ್ಯೂ, ಮಲೇರಿಯಾ, ಚಿಕನ್ಗುನ್ಯಾ ಮತ್ತು ಟೈಫಾಯ್ಡ್ನಂತಹ ರೋಗಗಳ ಭೀತಿ ಗ್ರಾಮವನ್ನು ಕಾಡುತ್ತಿದೆ. ಮಕ್ಕಳು, ವೃದ್ಧರು ಹಾಗೂ ಅಂಗವಿಕಲರು ನಿರಂತರ ಜ್ವರ ಮತ್ತು ಚರ್ಮರೋಗಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ.

*ಕುಡಿಯುವ ನೀರಿಗೂ ಕಲುಷಿತದ ಆತಂಕ*
ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಕೊಳಕು ಚರಂಡಿಗಳ ಪಕ್ಕದಲ್ಲೇ ಕುಡಿಯುವ ನೀರಿನ ಪೈಪ್ಲೈನ್ಗಳು ಹಾಗೂ ಜಲ ಜೀವನ್ ಮಿಷನ್ (JJM) ಯೋಜನೆಯ ಪೈಪ್ಗಳು ಹಾದುಹೋಗಿವೆ. ಹಲವೆಡೆ ಪೈಪ್ಗಳು ಹಾನಿಗೊಳಗಾಗಿರುವುದರಿಂದ ಚರಂಡಿಯ ಮಲಿನ ನೀರು ಕುಡಿಯುವ ನೀರಿಗೆ ಸೇರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದು ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವಾಗುವ ಸಾಧ್ಯತೆ ಇದೆ.

*ಅವೈಜ್ಞಾನಿಕ ಚತುಷ್ಪಥ ರಸ್ತೆ ಕಾಮಗಾರಿಯಿಂದ ಹೆಚ್ಚಿದ ಸಮಸ್ಯೆ*
ಹಿಂದೆ ಗ್ರಾಮದ ಚರಂಡಿ ನೀರು ಅಲ್ಪ ಸ್ವಲ್ಪವಾದರೂ ಮುಖ್ಯ ಚರಂಡಿಗೆ ಹರಿಯುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಚತುಷ್ಪಥ ರಸ್ತೆ ಕಾಮಗಾರಿಯ ವೇಳೆ ನಿರ್ಮಿಸಲಾದ ಮುಖ್ಯ ಚರಂಡಿಗಳು ಅವೈಜ್ಞಾನಿಕವಾಗಿರುವ ಕಾರಣ ಗ್ರಾಮದ ನೀರು ಮುಖ್ಯ ಚರಂಡಿಗೆ ಸೇರುವುದೇ ಕಷ್ಟವಾಗಿದೆ.
ಮಳೆಗಾಲದಲ್ಲಿ ಎರಡನೇ ಬ್ಲಾಕ್ ನ ಕೆಲವು ಬೀದಿಗಳ ಚರಂಡಿಯ ನೀರು ಮುಂದಕ್ಕೆ ಸಾಗಲಾಗದೆ ನೀರು ತುಂಬಿ ಮನೆಗಳ ಸಂದಿಗಳ ಮೂಲಕ ಗ್ರಾಮದ ಮಧ್ಯೆ ಇರುವ ಕಿರಿದಾದ 1ನೇ ಬ್ಲಾಕ್ನ ಚರಂಡಿಗೆ ಹೆಚ್ಚಿನ ಪ್ರಮಾಣದ ನೀರು, ಹರಿದು ಬಂದು ಹಾಲಿನ ಡೈರಿ ಮುಂಭಾಗದ ಕಿರಿದಾದ ಚರಂಡಿಗೆ ನುಗ್ಗುತ್ತದೆ. ಹೂಳು ತುಂಬಿಕೊಂಡಿರುವ ಈ ಚರಂಡಿಯಿಂದ ಹಲವು ಬಾರಿ ಸಮೀಪದ ಮನೆಗಳಿಗೆ ನೀರು ನುಗ್ಗಿರುವ ಘಟನೆಗಳು ನಡೆದಿವೆ. ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕ ಕ್ರಮ ಕೈಗೊಂಡಿದ್ದರೂ ಶಾಶ್ವತ ಪರಿಹಾರ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

*15 ವರ್ಷಗಳಿಂದ ಚರಂಡಿಯೇ ಇಲ್ಲದ 2ನೇ ಬ್ಲಾಕ್ನ ಬೀದಿ*
ಗ್ರಾಮದ 2ನೇ ಬ್ಲಾಕ್ನಲ್ಲಿ ಕಳೆದ 15 ವರ್ಷಗಳಿಂದ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಬಚ್ಚಲು ನೀರು ಹರಿಸಲು ವ್ಯವಸ್ಥೆಯಿಲ್ಲದ ಕಾರಣ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತಿದೆ. ಎರಡು ಬೀದಿಗಳಲ್ಲಿ ಚರಂಡಿಯೇ ಇಲ್ಲದಿರುವುದು ನಿವಾಸಿಗಳ ಪ್ರಮುಖ ಸಮಸ್ಯೆಯಾಗಿದೆ.

*ಅನುದಾನ ಎಲ್ಲಿಗೆ ಹೋಯಿತು?*
ಪ್ರತಿ ವರ್ಷ ಗ್ರಾಮೀಣ ನೈರ್ಮಲ್ಯ ಹಾಗೂ ಚರಂಡಿ ಸ್ವಚ್ಛತೆಗಾಗಿ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ, ಗ್ರಾಮದ ಸ್ಥಿತಿ ಮಾತ್ರ ಬದಲಾಗಿಲ್ಲ. ಈ ಹಣದ ಬಳಕೆ ಕುರಿತು ಗ್ರಾಮಸ್ಥರು ಪ್ರಶ್ನೆ ಎತ್ತಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದು, ನೈರ್ಮಲ್ಯ ಕಾಮಗಾರಿಗಳ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

“ಊರಲ್ಲಿ ಬದುಕುವುದೇ ಕಷ್ಟವಾಗಿದೆ”
“ಕಳೆದ ಆರು ತಿಂಗಳಿನಿಂದ ಚರಂಡಿ ಸ್ವಚ್ಛಗೊಳಿಸಿಲ್ಲ. ಸೊಳ್ಳೆಗಳ ಕಾಟದಿಂದ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಆಗಾಗ ಜ್ವರ ಬರುತ್ತಿದೆ. ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ , ಹೆಸರಿಗಷ್ಟೇ ಅರಸಾಪುರ ಗ್ರಾಮಪಂಚಾಯಿತಿ ಅರಸಾಪುರ ಗ್ರಾಮದಲ್ಲಿ ದಿನ ನಿತ್ಯ ಅಧಿಕಾರಿಗಳು ಕಚೇರಿಗೆ ಬರುತ್ತಾರೆ ಹೋಗುತ್ತಾರೆ ಗ್ರಾಮ ಪಂಚಾಯಿತಿ ಇರುವ ನಮ್ಮ ಊರೇ ಈ ಪರಿಸ್ಥಿತಿ ಇದೆ ಇನ್ನೂ ಈ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಸ್ಥಿತಿಯೆಂಗೋ.
— ಮಹಾಲಿಂಗಯ್ಯ, ಗ್ರಾಮಸ್ಥ

“ಮನೆಗೆ ನೆಂಟರು ಬರಲು ಹೆದರುತ್ತಾರೆ”
“ನಮ್ಮ ಊರಿನ ದುರ್ವಾಸನೆಯಿಂದ ಹೊರಗಿನವರು ಬರಲು ಇಚ್ಛಿಸುವುದಿಲ್ಲ. ಈ ಪರಿಸ್ಥಿತಿ ನೋಡಿ ನಮ್ಮ ಊರಿಗೆ ಸಂಬಂಧ ಬೆಳೆಸಲು ಸಹ ಜನರು ಹಿಂಜರಿಯುವಂತಾಗಿದೆ, ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಚರಂಡಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರು ಸ್ಪಂದಿಸಲಿಲ್ಲ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸತ್ತು ನಾನೇ ಸ್ವತಹ ನಮ್ಮ ಮನೆಯ ಮುಂದಿನ ಚರಂಡಿ ಸ್ವಚ್ಛಗೊಳಿಸಿಕೊಂಡೆ.”
—ತಿಮ್ಮಕ್ಕ ಸ್ಥಳೀಯ ಗೃಹಿಣಿ

“ನಾವು ಕಂದಾಯ ಕಟ್ಟುವುದಿಲ್ಲವೇ?”
“ನಮ್ಮ ಬೀದಿಗೆ ಕಳೆದ 15 ವರ್ಷಗಳಿಂದ ಚರಂಡಿ ವ್ಯವಸ್ಥೆಯೇ ಇಲ್ಲ. ನಾವು ಪಂಚಾಯಿತಿಗೆ ಕಂದಾಯ ಕಟ್ಟುತ್ತೇವೆ. ಆದರೆ ಬಚ್ಚಲು ನೀರನ್ನು ಎಲ್ಲಿಗೆ ಹರಿಸಬೇಕು ಎಂಬುದೇ ಪ್ರಶ್ನೆಯಾಗಿದೆ. ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. 2ನೇ ಬ್ಲಾಕ್ನಿಂದ ಆರು ಜನ ಪಂಚಾಯಿತಿ ಸದಸ್ಯರು ಆಯ್ಕೆಯಾಗುತ್ತಾರೆ. ಮತ ಕೇಳಲು ಬರುವ ಸದಸ್ಯರು ಚರಂಡಿ ಸಮಸ್ಯೆಯ ಬಗ್ಗೆ ಒಂದು ದಿನವಾದರೂ ಗಮನ ಹರಿಸಲಿಲ್ಲ. ಪಂಚಾಯಿತಿ ಅಧಿಕಾರಿಗಳೂ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಗ್ರಾಮದಲ್ಲಿ ಬೀದಿ ದೀಪಗಳು ಸಹ ಇಲ್ಲ ವೃದ್ಧರು, ಅಂಗವಿಕಲರು ,ಮಕ್ಕಳು ಸಂಜೆ ಸಮಯದಲ್ಲಿ ಸಂಚರಿಸುವುದು ಹೇಗೆ ಬಿದ್ದು ಕೈ ಕಾಲು ಮುರಿದುಕೊಂಡರೆ ಯಾರು ಹೊಣೆ ಈ ಮಳೆಗಾಲದ ಸಂದರ್ಭದಲ್ಲಿ ವಿಷ ಜಂತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಯಾರಿಗಾದರೂ ಕಚ್ಚಿ ಅನಾಹುತವಾದರೆ ಯಾರು ಹೊಣೆ
ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ
ನಮ್ಮ ಬೀದಿಗೆ ವೈಜ್ಞಾನಿಕ ಹಾಗೂ ಶಾಶ್ವತ ಚರಂಡಿಗಳನ್ನು ನಿರ್ಮಿಸಬೇಕು.”
— ತಿಮ್ಮಯ್ಯ, ಗ್ರಾಮದ 2ನೇ ಬ್ಲಾಕ್ ನಿವಾಸಿ
‘ಹಳ್ಳಿಗಳು ದೇಶದ ಬೆನ್ನೆಲುಬು’ ಎಂಬ ಮಾತು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು. ಗ್ರಾಮಸ್ಥರ ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳ ರಕ್ಷಣೆ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಅರಸಾಪುರ ಗ್ರಾಮದ ಜನರ ತಾಳ್ಮೆ ಮೀರಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಇಲ್ಲವಾದರೆ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡುವುದು ಖಚಿತ.
ವಿಶೇಷ ವರದಿ: ಶ್ರೀನಿವಾಸ್ ಕೊರಟಗೆರೆ
