ಚನ್ನರಾಯಪಟ್ಟಣ: ಪಟ್ಟಣದ ಅಕ್ಷರ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ ಏ.3 ಶುಕ್ರವಾರ ವಸುದೈವ ಕುಟುಂಬಕಂ ಎಂಬ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಶ್ರೀಲಂಕಾ ತಂಡವು ನಡೆಸಿಕೊಡಲಿದೆ ಎಂದು ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಚ್.ಬಿ.ಮದನ್ ಗೌಡ ತಿಳಿಸಿದರು.
ಪಟ್ಟಣದ ಪತ್ರಕರ್ತರ ಸಂಘದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಏಷ್ಯಾ ಮೀಡಿಯಾ ಕಲ್ಚರಲ್ ಅಸೋಸಿಯೇಷನ್ ಇದರಡಿ ಶ್ರೀಲಂಕಾದ ಫ್ಯೂಚರ್ ಲೀಡರ್ ಎಂಬ ಖಾಸಗಿ ಸಂಸ್ಥೆ ಶ್ರೀಲಂಕಾದ ಒಂದು ತಂಡವನ್ನು ಚನ್ನರಾಯಪಟ್ಟಣದ ಅಕ್ಷರ ಶಾಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.
ಇದರ ಉದ್ದೇಶ ನಮ್ಮ ದೇಶದ ಸ್ಥಳೀಯ ಸಂಸ್ಕೃತಿಯನ್ನು ಬೇರೆ ದೇಶದಲ್ಲಿ ಪ್ರದರ್ಶನ, ಪ್ರಚುರ ಪಡಿಸುವುದು ಹಾಗೂ ಆ ದೇಶದ ಸಾಂಸ್ಕೃತಿಕ ವೈಭವವನ್ನು ನಮ್ಮ ದೇಶದಲ್ಲಿ ಪ್ರಸ್ತುತ ಪಡಿಸುವುದು ಆಗಿರುತ್ತದೆ ಎಂದು ಹೇಳಿದರು.ಸಂಪೂರ್ಣವಾಗಿ ಶ್ರೀಲಂಕಾ ತಂಡ ಸಾಂಸ್ಕೃತಿಕ ವಿನಿಮಯಕ್ಕಾಗಿ ಆಗಮಿಸಲಿದ್ದು ಮೂರು ದಿನಗಳ ಕಾಲ ನಮ್ಮ ದೇಶದಲ್ಲಿ ಉಳಿಯಲಿದ್ದಾರೆ.
ನಮ್ಮ ರಾಜ್ಯದಲ್ಲಿ ಇದು ಮೊದಲನೇ ಕಾರ್ಯಕ್ರಮವಾಗಿದ್ದು ಇದೇ ರೀತಿ ನೇಪಾಳ, ಮಲೇಶಿಯಾ, ಮಯನ್ಮಾರ್, ಬಾಂಗ್ಲಾ ,ಪಾಕಿಸ್ತಾನ ಆ ದೇಶಗಳ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ರಾಜ್ಯದ ಇತರೆ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ವಿನಿಮಯವಾಗಲಿವೆ ಎಂದರು.
ಅಕ್ಷರ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಸುನಿಲ್ ಪ್ಯಾಟ್ರಿಕ್ ಅವರು ಮಾತನಾಡಿ, ಶ್ರೀಲಂಕಾ ತಂಡವು 40 ನಿಮಿಷಗಳ ಕಾಲ ಕಾರ್ಯಕ್ರಮ ಪ್ರಸ್ತುತ ಪಡಿಸಲಿದೆ.
ನಮ್ಮ ಶಾಲೆಯ ವಿದ್ಯಾರ್ಥಿಗಳು ವಿಭಿನ್ನತೆಯಲ್ಲಿ ಏಕತೆ, ಶ್ರೀ ರಾಮಾಯಣ ದರ್ಶನಂ, ಯಕ್ಷಗಾನ,
ಹುಲಿ ವೇಷ ಕುಣಿತ ಪ್ರದರ್ಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಅನಿಲ್ ಮರುಗೂರು ಮಾತನಾಡಿ, ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಎನ್. ಬಾಲಕೃಷ್ಣ , ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಉಪಾಧ್ಯಕ್ಷರಾದ ಎಚ್. ಬಿ. ಮದನ್ ಗೌಡ, ಹಾಸನ ಜಿಲ್ಲಾಧ್ಯಕ್ಷರಾದ ಜೆ. ಆರ್. ಕೆಂಚೇಗೌಡ, ವಿಜಯವಾಣಿ ಮೈಸೂರು ವಿಭಾಗದ ಸ್ಥಾನಿಕ ಸಂಪಾದಕ ಸತ್ಯನಾರಾಯಣ, ಫ್ಯೂಚರ್ ಲೀಡರ್ ಸಂಸ್ಥೆಯ ಪ್ರಿಯಾಂಗ ಬನಾರಾನಾಯಕ್, ಫ್ಯೂಚರ್ ಲೀಡರ್ ಸಂಸ್ಥೆಯ ಕಲ್ಚರಲ್ ಅಡ್ವೈಸರ್ ಉಪುಲ್ ಜೈಸಿಂಗೆ ಭಾಗವಹಿಸಲಿದ್ದಾರೆ ಎಂದರು.
ಅಕ್ಷರ ಸಂಸ್ಥೆಯ ಅಧ್ಯಕ್ಷರಾದ ಪಿ. ಸರೋಜಾದೇವಿ, ಖಜಾಂಚಿ ಚೇತನ್, ನಿರ್ದೇಶಕ ತಿರುಮಲ ಪ್ರಸಾದ್ ಹಾಗೂ ಶ್ರೀಲಂಕಾ ದೇಶದ ಸಂಗೀತ ನಿರ್ದೇಶಕರು, ನಾಯಕ ನಟ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಹೆಚ್ ಬಿ ಮದನಗೌಡ, ಎಂ ಆರ್ ಅನಿಲ್ ಕುಮಾರ್, ಅಕ್ಷರ ಸಂಸ್ಥೆಯ ಖಜಾಂಚಿಯಾದ ಸಿ.ಸಿ. ಚೇತನ್, ನಿರ್ದೇಶಕರಾದ ತಿರುಮಲ ಪ್ರಸಾದ್, ಪ್ರಾಂಶುಪಾಲರಾದ ಸುನಿಲ್ ಪ್ಯಾಟ್ರಿಕ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
