ಶ್ಲೋಕ – 10
ಅಭ್ಯಾಸೇSಪ್ಯಸಮರ್ಥೋSಸಿ ಮತ್ಕರ್ಮಪರಮೋ ಭವ ।
ಮದರ್ಥಮಪಿ ಕರ್ಮಾಣಿ ಕುರ್ವನ್ ಸಿದ್ಧಿಮವಾಪ್ಸ್ಯಸಿ ॥೧೦॥
ಅಭ್ಯಾಸೇ ಅಪಿ ಅಸಮರ್ಥನು; ಅಸಿ ಮತ್ ಕರ್ಮ ಪರಮಃ ಭವ ।
ಮತ್ ಅರ್ಥಮ್ ಅಪಿ ಕರ್ಮಾಣಿ ಕುರ್ವನ್ ಸಿದ್ಧಿಮ್ ಅವಾಪ್ಸ್ಯಸಿ –ಧ್ಯಾನದ ಅಭ್ಯಾಸವೂ ಅಸಾಧ್ಯವಾದರೆ ನನ್ನ ಆರಾಧನರೂಪವಾದ ಕರ್ಮಗಳಲ್ಲೆ ತೊಡಗು. ಕರ್ಮವನ್ನು ನನ್ನ ಪೂಜೆಯೆಂದು ಮಾಡಿಯೂ ಸಿದ್ಧಿಪಡೆಯಬಲ್ಲೆ.
ಕೆಲವರಿಗೆ ಎಷ್ಟೇ ಅಭ್ಯಾಸ ಮಾಡಿದರೂ ಏಕಭಕ್ತಿ ಸಾಧ್ಯವಾಗುವುದಿಲ್ಲ. ಅಧ್ಯಾತ್ಮ ಮಾರ್ಗದ ಸಾಧನೆಯಲ್ಲಿ ಮನಸ್ಸಿಗೆ ಒಂದು ಜನ್ಮದ ಅಭ್ಯಾಸ ಸಾಕಾಗುವುದಿಲ್ಲ. ಕೆಲವೊಮ್ಮೆ ಇಡೀ ಜನ್ಮ ಅಭ್ಯಾಸ ಮಾಡಿದರೂ ಏಕಾಗ್ರತೆ ಬಾರದೇ ಇರಬಹುದು. ಇಂಥವರಿಗೆ ಕರುಣಾಳು ಕೃಷ್ಣ ಹೇಳುತ್ತಾನೆ: “ನೀನು ಮಾಡುವ ಕರ್ಮವನ್ನು ಸ್ವಾರ್ಥಕ್ಕಾಗಿ ಮಾಡದೆ, ಭಗವಂತನ ಪೂಜೆ ಅನ್ನುವ ಅನುಸಂಧಾನದಿಂದ ಮಾಡು” ಎಂದು. ತನ್ನ ದೈನಂದಿನ ಪ್ರತಿ ಕರ್ಮವನ್ನು ಅರ್ಪಣಾಭಾವದಿಂದ ಭಗವಂತನ ಪೂಜೆ ಎಂದು ಮಾಡಿ, ಅಧ್ಯಾತ್ಮ ಮಾರ್ಗದಲ್ಲಿ ಸಿದ್ಧಿ ಪಡೆಯಬಹುದು.
