ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಾಟ್ಯಕಲಾ ನಿವಾಸ ವತಿಯಿಂದ ಆಯೋಜಿಸಿದ್ದ 19ನೇ ವರ್ಷದ ವಾರ್ಷಿಕೋತ್ಸವದ ನೃತ್ಯೋತ್ಸವವು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 150 ಮಕ್ಕಳು ಭಾಗವಹಿಸಿ ವಿವಿಧ ಭರತನಾಟ್ಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಕಾರ್ಯಕ್ರಮದಲ್ಲಿ ಬೆಂಗಳೂರು ಡಿ.ಡಿ. ಚಂದನ ಕಾರ್ಯಕ್ರಮ ಮುಖ್ಯಸ್ಥರಾದ ಎಚ್.ಎನ್. ಆರತಿ, ಕನ್ನಡ ಚಿತ್ರರಂಗದ ಪೋಷಕ ನಟರಾದ ಸುಂದರ್ ವೀಣಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಪಿ. ತಾರಾನಾಥ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಸನ ವಿಭಾಗದ ಜಂಟಿ ಕಾರ್ಯದರ್ಶಿ ಸೋಫಿ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ನಾಟ್ಯಕಲಾ ನಿವಾಸ ಸಂಸ್ಥೆ ವತಿಯಿಂದ ನೀಡಲಾಗುವ ‘ಸಮಾಜ ಸೇವಾ ತಿಲಕ’ ಪ್ರಶಸ್ತಿಯನ್ನು ಎಚ್.ಎನ್. ಆರತಿ ಹಾಗೂ ಸೋಫಿ ಫೆರ್ನಾಂಡಿಸ್ ಅವರಿಗೆ ನೀಡಿ ಗೌರವಿಸಲಾಯಿತು. ಮಾತನಾಡಿದ ಅವರು, ಮಕ್ಕಳ ಮಾನಸಿಕ ಬೆಳವಣಿಗೆಗೆ ನೃತ್ಯಾಭ್ಯಾಸ ಅತ್ಯಂತ ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟರು.

ಕನ್ನಡ ಚಿತ್ರರಂಗದ ಪೋಷಕ ನಟ ಸುಂದರ್ ವೀಣಾ ಅವರು ತಮ್ಮ ಕಲಾ ಜೀವನದ ಅನುಭವಗಳನ್ನು ಹಂಚಿಕೊಂಡು, ಕಲಾ ಕ್ಷೇತ್ರದಿಂದ ತಮಗೆ ದೊರೆತ ಮನ್ನಣೆ, ಲಾಭ ಹಾಗೂ ಅನುಭವಗಳ ಕುರಿತು ಮಕ್ಕಳೊಂದಿಗೆ ಮಾತನಾಡಿದರು.
ನಂತರ ನಡೆದ ನೃತ್ಯೋತ್ಸವದಲ್ಲಿ ಮೈಸೂರು ಮಹಾರಾಜರ ಅಪರೂಪದ ರಚನೆಯ ‘ಚಿಂತಯೇ ಸದಾ ವರನ ವದನಂ’ ಕೃತಿಯನ್ನು ಸಿಂಧೂನಾಮಕ್ರಿಯೆ ರಾಗ ಹಾಗೂ ದೇಶಾದಿ ತಾಳದಲ್ಲಿ ನಾಟ್ಯಕಲಾ ನಿವಾಸದ ಗುರು ವಿದ್ವಾನ್ ಉನ್ನತ್ ಅವರು ವಿಶೇಷವಾಗಿ ಸಂಯೋಜಿಸಿದ್ದರು. ಸಂಸ್ಥೆಯ ಮಕ್ಕಳು ಈ ಕೃತಿಯನ್ನು ಮನೋಜ್ಞವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಸಂಗೀತದಲ್ಲಿ ಕೇರಳದ ಶ್ರೀ ವಿನೀತ್ ಪುರವಂಕರ, ಮೃದಂಗದಲ್ಲಿ ಮೈಸೂರಿನ ವಿದ್ವಾನ್ ವಿಕ್ರಂ ಭಾರದ್ವಾಜ್, ಕೊಳಲಿನಲ್ಲಿ ವಿದ್ವಾನ್ ಸಮೃದ್ಧ್ ಶ್ರೀನಿವಾಸ್, ಪಿಟೀಲಿನಲ್ಲಿ ತುಮಕೂರಿನ ವಿದ್ವಾನ್ ಯಶಸ್ವೀ ಹಾಗೂ ರಿದಮ್ ಪ್ಯಾಡ್ನಲ್ಲಿ ವಿದ್ವಾನ್ ಶ್ರೀ ವಿನಯ್ ರಂಗದೊಳ್ ಸಹಕಾರ ನೀಡಿದರು.
ಮೈಸೂರು ಆಸ್ಥಾನ ಕವಿ ಶ್ರೀ ಸದಾಶಿವರಾವ್ ಅವರ ಭೈರವಿ ರಾಗದ ‘ಶ್ರೀ ಪಾರ್ಥಸಾರಥಿ’ ಕೃತಿಯನ್ನು ವಿದ್ವಾನ್ ಉನ್ನತ್ ಅವರ ಕ್ಲಿಷ್ಟಕರ ಹಾಗೂ ವಿಶಿಷ್ಟ ಸಂಯೋಜನೆಯಲ್ಲಿ ಪ್ರದರ್ಶಿಸಲಾಯಿತು. ಈ ನೃತ್ಯದಲ್ಲಿ ಮೈಸೂರಿನ ವಿದ್ವಾನ್ ಪವನ್ ಕುಮಾರ್.ಆರ್., ಶ್ರೀ ಭುವನ್ ಕುಮಾರ್ ಅವರ ತ್ರಿವಳಿ ನೃತ್ಯ ವಿಶೇಷವಾಗಿ ಗಮನ ಸೆಳೆಯಿತು.
ಇದರೊಂದಿಗೆ ಮುತ್ತಯ್ಯ ಭಾಗವತರ ಕನ್ನಡದ ಪ್ರಪ್ರಥಮ ಕೃತಿ ‘ಶ್ರೀ ದುರ್ಗಾದೇವಿ’, ಸರಸಂಗಿ ರಾಗದ ‘ಶ್ರೀ ಸದಾಶಿವಮ್’ ಹಾಗೂ ಮೈಸೂರು ವಾಸುದೇವಾಚಾರ್ಯರ ಶ್ರೀ ರಾಗದ ತಿಲ್ಲಾನ ಪ್ರೇಕ್ಷಕರಿಗೆ ಮನಮೋಹಕ ನೃತ್ಯಾನುಭವ ನೀಡಿದವು.
ಒಟ್ಟಾರೆ, ನಾಟ್ಯಕಲಾ ನಿವಾಸದ 19ನೇ ವರ್ಷದ ವಾರ್ಷಿಕೋತ್ಸವದ ನೃತ್ಯೋತ್ಸವವು ಮಕ್ಕಳ ಪ್ರತಿಭೆ, ಗುರುಗಳ ಸೃಜನಶೀಲ ಸಂಯೋಜನೆ ಮತ್ತು ವಿದ್ವಾಂಸರ ಸಂಗೀತ ಸಹಕಾರದಿಂದ ಕಲಾರಸಿಕರ ಮನದಲ್ಲಿ ಅಚ್ಚಳಿಯದ ಅನುಭವ ಮೂಡಿಸಿತು.
