ಹಾಸನ: ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಅಪಪ್ರಚಾರ ವಿರೋಧಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಆರಂಭಿಸಿದ ಸದಸ್ಯರು, ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಪರ ಘೋಷಣೆ ಕೂಗುತ್ತ ಎನ್.ಆರ್. ವೃತ್ತ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ, ‘ರಾಜ್ಯದ ಜನತೆಯ ಧರ್ಮಸ್ಥಳದ ವಿಚಾರದಲ್ಲಿ ಕೈಕಟ್ಟಿ ಕೂತಿಲ್ಲ. ಈ ವಿಚಾರದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟರೆ ಮುಖ್ಯಮಂತ್ರಿಯೇ ಕಾರಣರಾಗಲಿದ್ದು, ಕೂಡಲೇ ಇದಕ್ಕೆ ಇತಿಶ್ರೀ ಹಾಡಬೇಕು’ ಎಂದು ಆಗ್ರಹಿಸಿದರು.
‘ಧರ್ಮಸ್ಥಳ ಪುಣ್ಯಕ್ಷೇತ್ರವಾಗಿದ್ದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಹಿತೈಷಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಹೆಗ್ಗಡೆಯವರು ಇದುವರೆಗೂ ಅನೇಕ ಪರೀಕ್ಷೆ ಎದುರಿಸಿದ್ದಾರೆ. ಇದೀಗ ಅನಾಮಧೇಯ ವ್ಯಕ್ತಿಯ ಹೇಳಿಕೆ ಆಧರಿಸಿ ಧರ್ಮಸ್ಥಳದ ಸುತ್ತ ಉತ್ಖನನ ನಡೆಯುತ್ತಿದೆ. ಇದು ರಾಜ್ಯ ವ್ಯಾಪಿ ವಿಸ್ತರಿಸಿದರೂ ಅಚ್ಚರಿಯಿಲ್ಲ’ ಎಂದು ದೂರಿದರು.
‘ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಕಡೆ ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ಗಂಭೀರ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ, ಧರ್ಮಸ್ಥಳ ಉತ್ಖನನ ವಿಚಾರದಲ್ಲಿ ಎಸ್ಐಟಿ ರಚಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ ಅವರು, ಹಾಸನದಲ್ಲಿ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಅತ್ಯಾಚಾರವಾಗಿದೆ. ಸಂಬಂಧಪಟ್ಟ ಸಚಿವರು ಯಾಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈಗಾಗಲೇ 16 ಕಡೆ ಗುಂಡಿ ತೆಗೆಯಲಾಗಿದೆ. ಯಾವುದೇ ಸಾಕ್ಷಿಗಳು ದೊರೆತಿಲ್ಲ. 40 ರಿಂದ 50 ವರ್ಷ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಅವರಿಗೆ ಧರ್ಮಸ್ಥಳ ಕ್ಷೇತ್ರದ ಕುರಿತು ಗೊತ್ತಿಲ್ಲವೇ? 16 ವರ್ಷ ಹಿಂದೆ ನಡೆದಿರುವ ಸಂಸ್ಕಾರ ಮಾಡಿದ ಶವ ತೆಗೆದು ಪರೀಕ್ಷೆ ಮಾಡಲು ಹೊರಟಿದ್ದೀರಿ. ಆದರೆ ಹಾಸನ ಜಿಲ್ಲಾ ಕೇಂದ್ರದಲ್ಲೇ ಅತ್ಯಾಚಾರ ಆಗುತ್ತಿದೆ. ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.
ಧರ್ಮದ ಉಳಿವಿಗೆ ಎಲ್ಲರೂ ಕೈಜೋಡಿಸಲಿದ್ದು ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾಲವು ದೂರವಿಲ್ಲ ಎಂದು ಎಚ್ಚರಿಸಿ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಡಾ. ಸತೀಶ್, ಡಾ.ರಮೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಪ್ರಸನ್ನ ಕುಮಾರ್, ಗಗನ್ ಗಾಂಧಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಕಟ್ಟಾಯ ಶಿವಕುಮಾರ್, ವೇದಾವತಿ, ವಕೀಲ ಹೊಂಬೇಶ್, ವಿಶ್ವಕರ್ಮ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ. ಹರೀಶ್, ಎಚ್ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಜೈನ ಸಮುದಾಯದ ಮುಖಂಡರು, ಮಹಿಳಾ ಸಂಘದ ಸದಸ್ಯರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
ಕ್ಷೇತ್ರದ ಜೊತೆ ವಕೀಲರ ಸಂಘ
‘ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರಿಂದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಎಸ್ಐಟಿ ರಚನೆಗೆ ನಮ್ಮ ವಿರೋಧವಿಲ್ಲ. ಆದರೆ ದೇವಾಲಯ ಮತ್ತು ವೀರೇಂದ್ರ ಹೆಗ್ಗಡೆಯವರ ಮೇಲೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕಿಡಿಗೇಡಿಗಳನ್ನು ಕೊಡಲೇ ಬಂಧಿಸಬೇಕು’ ಎಂದು ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾರ್ಲೆ ಮೊಗಣ್ಣಗೌಡ ಆಗ್ರಹಿಸಿದರು.
‘ಧರ್ಮಸ್ಥಳದ ವಿಚಾರದಲ್ಲಿ ಹೋರಾಡಲು ನಾವು ಸಿದ್ದರಿದ್ದೇವೆ. ದೇವಾಲಯದ ಹಾಗೂ ಅದರ ಪಾವಿತ್ರ್ಯಕ್ಕೆ ಧಕ್ಕೆ ತರುವವರ ನಡೆ ಖಂಡಿಸುತ್ತೇವೆ. ಕ್ಷೇತ್ರದ ಜೊತೆಗೆ ವಕೀಲರ ಸಂಘ ಇರಲಿದೆ’ ಎಂದರು.
ಮುಜರಾಯಿ ವ್ಯಾಪ್ತಿಗೆ ತರಲು ಹುನ್ನಾರ
ಧರ್ಮಸ್ಥಳದಲ್ಲಿ ಅನಾಮಧೇಯ ವ್ಯಕ್ತಿ ನೀಡಿದ ದೂರಿನ ಅನ್ವಯ ಗುಂಡಿ ತೆಗೆದರೂ ಯಾವುದೇ ಕುರುಹು ಸಿಕ್ಕಿಲ್ಲ. ಮುಂದೆ ಧರ್ಮಸ್ಥಳದ ಗರ್ಭಗುಡಿ ತಲುಪಿದರೂ ಅನುಮಾನವಿಲ್ಲ ಎಂದು ಬಿಜೆಪಿ ಮುಖಂಡ ವಕೀಲ ನವಿಲೇ ಅಣ್ಣಪ್ಪ ದೂರಿದರು. ಸರ್ಕಾರ ಪಾಪರ್ ಆಗಿದ್ದು ಶತಮಾನಗಳ ಇತಿಹಾಸ ಹೊಂದಿರುವ ಧಾರ್ಮಿಕ ಕ್ಷೇತ್ರದ ವಶಕ್ಕೆ ಹುನ್ನಾರ ನಡೆಯುತ್ತಿದೆ. ಈಗಾಗಲೇ ಬೆಂಗಳೂರಿನ ಆಂಜನೇಯ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಧರ್ಮಸ್ಥಳ ರಾಜ್ಯದಲ್ಲಿ ಅನೇಕ ಜನಪರ ಕೆಲಸವನ್ನು ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಎಡಪಂಥೀಯರ ಓಲೈಕೆಗೆ ಸರ್ಕಾರ ಹಿಂದೂ ಧರ್ಮದ ಬಲಿ ಕೊಡಲು ಹೊರಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
