ಕೆ.ಆರ್.ಪೇಟೆ,ಏ.19: ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್ಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ 31 ಬಾಲಗರ್ಭಿಣಿಯರಿಗೆ ಭ್ರೂಣಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿರುವುದನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪ ಇರುವ ನಾವಿ ಡಯಾಗ್ನಾಸ್ಟಿಕ್ ಸೆಂಟರ್ ಮತ್ತು ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಇರುವ ಕುಶಾಲ್ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಈ ಕಾನೂನು ಬಾಹಿರ ದಂದೆ ನಡೆಯುತ್ತಿದೆ.
ನಾವಿ ಡಯಾಗ್ನಾಸ್ಟಿಕ್ ಸೆಂಟರ್ ಮೈಸೂರು ಮೂಲದ ವೈದ್ಯರೊಬ್ಬರು ಚಾಮರಾಜನಗರ, ನಂಜನಗೂಡು, ಮೈಸೂರು, ಕೆ.ಆರ್.ಪೇಟೆ ಮುಂತಾದ ಕಡೆ ಐದಕ್ಕಿಂತ ಅಧಿಕ ಕೇಂದ್ರಗಳನ್ನು ಹೊಂದಿರುವ ವೈದ್ಯರೊಬ್ಬರು ನಡೆಸುತ್ತಿರುವ ಸೆಂಟರ್ನಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಸಿದ ವೇಳೆ ನಾವಿ ಡಯಾಗ್ನಾಸ್ಟಿಕ್ ಸೆಂಟರ್’ನಲ್ಲಿ 2024ನೇ ಸಾಲಿನಲ್ಲಿ 19 ಮತ್ತು 2025ನೇ ಸಾಲಿನಲ್ಲಿ 5 ಸೇರಿದಂತೆ ಒಟ್ಟು 24 ಬಾಲ ಗರ್ಭಿಣಿಯರಿಗೆ ನಿಯಮಬಾಹಿರವಾಗಿ ಸ್ಕ್ಯಾನಿಂಗ್ ಮಾಡಲಾಗಿದೆ. ಅದೇ ರೀತಿ ಪೋಲೀಸ್ ಠಾಣೆ ಬಳಿ ಇರುವ ‘ಕುಶಾಲ್ ಡಯಾಗ್ನಾಸ್ಟಿಕ್ ಸೆಂಟರ್’ನಲ್ಲೂ 7 ಬಾಲ ಗರ್ಭಿಣಿಯರಿಗೆ ಲಕ್ಷಾಂತರ ರೂ ಹಣ ವಸೂಲಿ ಮಾಡಿ ಸ್ಕ್ತಾನಿಂಗ್ ಮಾಡಿದ ಆರೋಪ ಕೇಳಿಬಂದಿದೆ.

18 ವರ್ಷದೊಳಗಿನ (ಅಪ್ರಾಪ್ತ ವಯಸ್ಸಿನ) ಹೆಣ್ಣು ಮಕ್ಕಳು ಸ್ಕ್ಯಾನಿಂಗ್ಗೆ ಬಂದ ಸಮಯದಲ್ಲಿ ‘ಪೋಕ್ಸೊ ಕಾಯ್ದೆ’ ಪ್ರಕಾರ ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಮಾಡದೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಸ್ಕ್ಯಾನಿಂಗ್ ವಿವರಗಳೇ ಇಲ್ಲ: ಕುಶಾಲ್ ಡಯಾಗ್ನಾಸ್ಟಿಕ್ ಸೆಂಟರ್ನಲ್ಲಿ 2018ನೇ ಸಾಲಿನಿಂದ ಈವರೆಗೆ ಗರ್ಭಿಣಿಯರಿಗೆ ಒಟ್ಟು 10,101 ಸ್ಕ್ಯಾನಿಂಗ್ ಮಾಡಿದ್ದು, ಈ ಪೈಕಿ ರಿಜಿಸ್ಟರ್ನಲ್ಲಿ ಕೇವಲ 3,629 ಪ್ರಕರಣಗಳ ಮಾಹಿತಿಯನ್ನು ಮಾತ್ರ ನಮೂದಿಸಲಾಗಿದೆ. ಉಳಿದ 6,472 ಸ್ಕ್ಯಾನಿಂಗ್ ವಿವರಗಳನ್ನು ನಮೂದಿಸಿಲ್ಲ.
ಅಷ್ಟೇ ಅಲ್ಲ, 18 ವರ್ಷ ಮೇಲ್ಟಟ್ಟ 20 ವರ್ಷದೊಳಗಿನ ಮಹಿಳೆಯರಿಗೆ ವಯಸ್ಸಿನ ದೃಢೀಕರಣ ದಾಖಲಾತಿಯನ್ನು ಪಡೆಯದೇ 64 ಗರ್ಭಿಣಿಯರಿಗೆ ಸ್ಕ್ಯಾನಿಂಗ್ಗಳನ್ನು ಮಾಡಿ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಲೋಕಾಯುಕ್ತಕ್ಕೆ ದೂರು: ಮಂಜುನಾಥ್ ಎಂಬುವರು, ‘ಕೆ.ಆರ್.ಪೇಟೆಯ ಖಾಸಗಿ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡಲಾಗುತ್ತಿದೆ’ ಎಂದು ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ, ಶೋಧ ನಡೆಸಿ, ವರದಿ ನೀಡುವಂತೆ ಉಪಲೋಕಾಯುಕ್ತ ಬಿ. ವೀರಪ್ಪ ಅವರು ಆದೇಶಿಸಿದ್ದರು. ಆದೇಶದ ಮೇರೆಗೆ ಮಂಡ್ಯ, ಮೈಸೂರು ಮತ್ತು ರಾಮನಗರ ಜಿಲ್ಲೆಯ ಲೋಕಾಯುಕ್ತ ಪೊಲೀಸರು 9 ತಂಡಗಳನ್ನು ರಚಿಸಿಕೊಂಡು ಏ.17ರಂದು ಏಕಕಾಲಕ್ಕೆ 9 ಕಡೆ ದಾಳಿ ನಡೆಸಿದಾಗ ಪ್ರಕರಣಗಳು ಪತ್ತೆಯಾಗಿವೆ.
‘ಡೆಕಾಯ್’ ಕಾರ್ಯಾಚರಣೆ: ಕೆಲವು ವರ್ಷಗಳಿಂದ ನಡೆದ ‘ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ’ ಪ್ರಕರಣಗಳು ‘ಸಕ್ಕರೆ ನಾಡು’ ಮಂಡ್ಯಕ್ಕೆ ಕಳಂಕ ತಂದಿದ್ದವು. ಆರೋಗ್ಯ ಇಲಾಖೆಯ ವಿಶೇಷ ತಂಡ ‘ಡೆಕಾಯ್ ಕಾರ್ಯಾಚರಣೆ’ (ಹೆಣ್ಣು ಭ್ರೂಣ ಲಿಂಗ ಪತ್ತೆ ಜಾಲ ಭೇದಿಸಲು ಆರೋಗ್ಯ ಇಲಾಖೆಯಿಂದ ತರಬೇತುಗೊಂಡ ಗರ್ಭಿಣಿಯನ್ನು ಕಳುಹಿಸಿ ನಡೆಸಿದ ಕಾರ್ಯಾಚರಣೆ) ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಬಳಕೆಯಾಗದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಸೇರಿದಂತೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ‘ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ’ಗಳು ಇದ್ದರೂ ಅವುಗಳನ್ನು ಬಳಕೆ ಮಾಡಲು ರೇಡಿಯಾಲಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ.
ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್ಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಸೆಂಟರ್ಗಳಿಗೆ ಶಿಫಾರಸು ಮಾಡಿದ್ದಾರೆ’ ಎಂಬ ಲೋಪವನ್ನು ಮಂಡ್ಯ ಲೋಕಾಯುಕ್ತ ಪೊಲೀಸರು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.
– ಶ್ರೀನಿವಾಸ್ ಆರ್.
