ಕೆ.ಆರ್.ಪೇಟೆ : ಪಟ್ಟಣದ ಗ್ರಾಮ ದೇವತೆ ಶ್ರೀ ದೊಡ್ಡಕೇರಮ್ಮನವರ ಬ್ರಹ್ಮ ರಥೋತ್ಸವವು ಇಂದು ಸಂಜೆ ಗೋಧೂಳಿ ಲಗ್ನದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪಟ್ಟಣದ ಪ್ರಮುಖರು ದೇವಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಭಕ್ತರು ರಥಕ್ಕೆ ಹಣ್ಣು-ಜವನ ಸಮರ್ಪಿಸಿ “ಉಘೇ.. ಉಘೇ..” ಎಂಬ ಘೋಷಣೆಗಳ ನಡುವೆ ರಥವನ್ನು ಎಳೆಯುವ ಮೂಲಕ ಭಕ್ತಿಭಾವ ವ್ಯಕ್ತಪಡಿಸಿದರು.
ಪ್ರತಿ ವರ್ಷವೂ ಯುಗಾದಿಯ ನಂತರ ಅಗ್ರಹಾರ ಬಾಚಳ್ಳಿಯ ಶ್ರೀ ಲಕ್ಷ್ಮಿದೇವಮ್ಮನವರ ರಥೋತ್ಸವದ ಒಂದು ವಾರದ ಬಳಿಕ ದೊಡ್ಡಕೇರಮ್ಮನವರ ರಥೋತ್ಸವವನ್ನು ಆಚರಿಸುವ ಸಂಪ್ರದಾಯ ಮುಂದುವರಿದಿದ್ದು, ಅದರಂತೆ ಈ ಬಾರಿಯೂ ಕಳೆದ ಮಂಗಳವಾರದಿಂದಲೇ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ರಂಗಕುಣಿತ, ಬಾಯಿಬೀಗ, ಹಸಿರು ಬಂಡಿ ಉತ್ಸವ, ಸಿಡಿಮರ ತರುವ ಕಾರ್ಯಕ್ರಮ, ಹೂವಿನ ತೇರು, ಚಿಕ್ಕಮ್ಮ ತಾಯಿ ಉತ್ಸವ ಸೇರಿದಂತೆ ಹಲವು ಆಚರಣೆಗಳು ಜರುಗಿದ್ದವು.

ಇಂದು ನಡೆದ ಬ್ರಹ್ಮ ರಥೋತ್ಸವವು ಶ್ರೀ ಭ್ರಮರಾಂಭ-ಶ್ರೀ ಮಲ್ಲಿಕಾರ್ಜುನ ಸ್ವಾಮಿ ಈಶ್ವರ ದೇವಾಲಯದಿಂದ ಪ್ರಾರಂಭವಾಗಿ ಮುಕ್ಕಟ್ಟೆ ಚೌಕ, ಹಳೆ ಪೋಸ್ಟ್ ಆಫೀಸ್, ದುರ್ಗಾಭವನ್ ಸರ್ಕಲ್ ಹಾಗೂ ಶ್ರೀ ಗಣಪತಿ ದೇವಸ್ಥಾನದ ಬೀದಿಗಳಲ್ಲಿ ಸಂಚರಿಸಿ ಸ್ವಸ್ಥಾನದಲ್ಲಿ ಸಂಪನ್ನಗೊಂಡಿತು.

ರಥೋತ್ಸವದಲ್ಲಿ ಶಾಸಕ ಹೆಚ್.ಟಿ. ಮಂಜು, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಸಮಾಜಸೇವಕ ಆರ್ಟಿಓ ಮಲ್ಲಿಕಾರ್ಜುನ್ ಸೇರಿದಂತೆ ನೂರಾರು ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
