ತುಮಕೂರು:ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ನಿಮ್ಮ ಎನಮರೇಷನ್ ಫಾರಂನ್ನು ಬಿಎಲ್ಓಗಳಿಗೆ ಕೊಟ್ಟ ಮಾತ್ರ ಮುಗಿಯುವುದಿಲ್ಲ.ಆ ನಂತರದಲ್ಲಿ ನಿಮ್ಮ ಹೆಸರು ಕರಡು ಮತದಾರರ ಪಟ್ಟಿಯಲ್ಲಿದೆಯೇ?ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಂಡು, ಒಂದು ವೇಳೆ ಕೈಬಿಟ್ಟಿದ್ದರೆ, ನಿಮ್ಮ ಬಳಿ ಇರುವ ಸ್ವೀಕೃತಿ ಪತ್ರದೊಂದಿಗೆ ಅಕ್ಷೇಪಣೆ ಸಲ್ಲಿಸಿ, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ತಿಳಿಸಿದ್ದಾರೆ.
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಅವರ ಗೃಹ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಎಸ್.ಐ.ಆರ್. ಕುರಿತ ವಿಶೇಷ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಒಮ್ಮೆ ಅಂತಿಮ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಟ್ಟರೆ, ಅದನ್ನು ಸೇರಿಸಲು ಬಹು ಕಷ್ಟ ಪಡಬೇಕಾಗುತ್ತದೆ.ಅಲ್ಲದೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಎಸ್.ಐ.ಆರ್, ಪ್ರಾರಂಭವಾಗಿ 15 ದಿನಗಳು ಕಳೆದಿವೆ.ಮುಂದಿನ 15 ದಿನ ನಮಗೆ ಅತ್ಯಂತ ಎಚ್ಚರಿಕೆಯ ದಿನಗಳು, ನಾವು ಪ್ರತಿ ಬೂತನಲ್ಲಿರುವ ಬಿ.ಎಲ್.ಓ 02 ಗಳು ತಮ್ಮ ವಾರ್ಡುಗಳಿಗೆ ಸಂಬಂಧಿಸಿದ ಮತದಾರರು ಎನಂಬರೇಷನ್ ಫಾರಂ ನೀಡಿದ್ದಾರೊ, ಇಲ್ಲವೇ ಎಂದು ಪರಿಶೀಲಿಸಿ, ಯಾರು ಫಾರಂ ವಾಪಸ್ ಬಿಎಲ್ಓ ಗಳಿಗೆ ನೀಡುವುದರ ಜೊತೆಗೆ, ಸ್ವೀಕೃತಿ ಪತ್ರವನ್ನು ಭದ್ರವಾಗಿ ಇಟ್ಟುಕೊಳ್ಳಬೇಕು.ಈ ವಿಚಾರದಲ್ಲಿ ನಿರ್ಲಕ್ಷ ಬೇಡ.ನಿಮ್ಮ ಬಳಿ 2002ರ ಮತದಾರರ ಪಟ್ಟಿಯ ಮಾಹಿತಿ ಇಲ್ಲದಿದ್ದರೂ ಚಿಂತೆಯಿಲ್ಲ.ನಿಮ್ಮ ಕುಟುಂಬದ ಹಿರಿಯ ಮತದಾರರ ಹೆಸರನ್ನು ನಮೂದಿಸಿ, ನಿಮ್ಮ ಮಾಹಿತಿಯನ್ನು ನಮೂದಿಸಿ ನೀಡಲು ಅವಕಾಶವಿದೆ. ಹಾಗಾಗಿ ಎಲ್ಲರೂ ಮುಂದಿನ 15 ದಿನ ಎಸ್.ಐ.ಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ.ರಫೀಕ್ಅಹಮದ್ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಶಫಿಅಹಮದ್ ಮಾತನಾಡಿ, ಎಸ್.ಐ.ಆರ್. ಪ್ರಕ್ರಿಯನ್ನು ನಮ್ಮ ಸರಕಾರ ಬಹಳ ಗಂಭೀರವಾಗಿ ಪರಿಗಣಿಸಿ, ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಸಿ.ಎಂ. ಡಿ.ಕೆ.ಶಿವಕುಮಾರ್, ಡಿ.ಸಿ.ಎಂ ಡಾ.ಜಿ.ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಪ್ರತಿ ಮತದಾರನ ಹಕ್ಕು ರಕ್ಷಿಸಲು ಮುಂದಾಗಿದ್ದಾರೆ. ಹಾಗಾಗಿ ನಾವು ಕೂಡ ಅದೇ ರೀತಿಯಲ್ಲಿ ಇದೊಂದು ಪಕ್ಷದ ಕೆಲಸ ಎಂದು ಪರಿಗಣಿಸಿ, ಪ್ರತಿ ಬಿಎಲ್ಓ ಕೂಡ ಹೆಚ್ಚು ಸಕ್ರಿಯರಾಗಿ ಕೆಲಸ ಮಾಡಬೇಕಾಗಿದೆ. ದಲಿತರು, ಸ್ಲಂ ಜನರಲ್ಲಿ ಇರುವ ಜಾಗೃತಿ ಇತರೆ ವರ್ಗಗಳ ಮತದಾರರಲ್ಲಿಯೂ ಮೂಡಬೇಕಿದೆ. ಆಗ ಮಾತ್ರ ನಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು ಸಾಧ್ಯ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳನ್ನು ನಡೆಸಲಾಗುವುದು ಎಂದರು.
ನಗರಸಭೆಯ ಮಾಜಿ ಸದಸ್ಯತರುಣೇಶ್ ಮಾತನಾಡಿ, ಎಸ್.ಐ.ಆರ್. ಒಂದು ಪ್ರಮುಖ ಕೆಲಸ ಹಾಗಾಗಿ ಜನರು ಒಂದು ದಿನದ ಕೆಲಸ ಹೋದರು ಚಿಂತೆಯಿಲ್ಲ. ನಿಮ್ಮ ಹಕ್ಕಿನ ರಕ್ಷಣೆ ಕಡೆಗೆ ಗಮನಹರಿಸಿ ಎಂದು ಸಲಹೆ ನೀಡಿದರು.
ನಗರಪಾಲಿಕೆ ಮಾಜಿ ಸದಸ್ಯ ನಯಾಜ್ಅಹಮದ್ ಮಾತನಾಡಿ, ಎಸ್.ಐ.ಆರ್.ಗೆ ಅನುಗುಣವಾಗಿ ನೊಂದಣಿ ಫಾರಂ ತುಂಬುವುದು ಎಷ್ಟು ಮುಖ್ಯವೋ, ಸ್ವೀಕೃತಿಯನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹಾಗಾಗಿ ತಾವುಗಳು ಎಚ್ಚರಿಕೆ ವಹಿಸಬೇಕು ಎಂದರು.
ಸಭೆಯಲ್ಲಿ ಮುಖಂಡರಾದ ಮಂಜುನಾಥ್, ಮೋಹನ್, ಜಿಯಾವುಲ್ಲಾ, ಉಬೇದುಲ್ಲಾ ಷರೀಫ್, ಆದಬ್,ಆಟೋರಾಜು, ಮೆಹಬೂಬ್ ಪಾಷ, ಸೈಯದ್ರಹಮತ್ತುಲ್ಲಾ, ಇರ್ಫಾನ್ , ನದೀಂಪಾಷ, ಅಫ್ತಾಬ್ಅಹಮದ್,ಜಾಕೀರ್ ಪಾಷ, ವಿಜಯಲಕ್ಷ್ಮೀ,ಲಕ್ಷ್ಮೀದೇವಿ, ಸೌಭಾಗ್ಯ,ಗೌಸ್ಫೀರ್, ಷಪಿ, ಸುಭಾನ್ ಮತ್ತಿತರರು ಪಾಲ್ಗೊಂಡಿದರು.
